ಲತಾ ಮಂಗೇಶ್ಕರ್ ‘ಗಾನಕೋಗಿಲೆ’

‘ಗಾನಕೋಗಿಲೆ’ ಎಂಬ ಮಾತನ್ನು ಬಹಳಷ್ಟು ಗಾಯಕರ ಬಗ್ಗೆ ಹೇಳುತ್ತೇವೆ. ನಮ್ಮ ದೇಶದ ನರನಾಡಿಗಳಲ್ಲಿ ಗಾನದ ಹೃದಯನಾದವನ್ನು ಮಿಡಿದ ಮಹಾನ್ ಗಾಯಕಿ ಲತಾಮಂಗೇಶ್ಕರ್ ಅವರು ಕೋಗಿಲೆಯ ಸರ್ವಶ್ರೇಷ್ಠತೆಗೆ ಅನುರೂಪವಾಗಿದ್ದವರು.
ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. ಶಾಸ್ತ್ರೀಯ ಸಂಗೀತಕಾರ ಮತ್ತು ರಂಗನಟ ಪಂಡಿತ್ ದೀನನಾಥ ಮಂಗೇಶ್ಕರ್ ಅವರ ಪುತ್ರಿಯಾದ ಲತಾ ಅವರ ಮೊದಲ ಹೆಸರು ‘ಹೇಮಾ’ ಎಂದಿತ್ತು. ತಂದೆಯವರಿಗೆ ತಮ್ಮ ಮಗಳ ಬಹುಮುಖ ಪ್ರತಿಭೆಯ ಕುರಿತು ಅತ್ಯಂತ ಹೆಮ್ಮೆ ತುಂಬಿತ್ತು. ‘ಭಾವ್ ಬಂಧನ್’ ಎಂಬ ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ‘ಹೇಮಾ’ ಬದಲು ‘ಲತಾ’ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟು, ತಂದೆ ನಡೆಸುತ್ತಿದ್ದ ನಾಟಕಗಳಲ್ಲಿನ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು.
ಒಮ್ಮೆ ‘ಸಂಗೀತ್ ಸೌಭದ್ರ್’ ನಾಟಕದ ನಾರದನ ಪಾತ್ರಧಾರಿ, ಏನೋ ಕಾರಣದಿಂದ ಬರಲಿಲ್ಲ. ಲತಾ ತಮ್ಮ ತಂದೆಯವರಿಗುಂಟಾದ ತೊಂದರೆ ನಿವಾರಿಸಲು ತಾವೇ ಆ ಪಾತ್ರವನ್ನು ಮಾಡಿದರು. 8 ವರ್ಷದ ಬಾಲೆ ಲತಾ ಎಲ್ಲರ ಮನಗೆದ್ದು ಒನ್ಸ್ ಮೊರ್ ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು. ನಂತರ, ‘ರಾಮಕೃಷ್ಣ ಬುವಾವಚೆ’ ಮತ್ತು, ‘ಉಸ್ತಾದ್ ಅಮಾನತ್ ಖಾನ್’ ಅವರಿಂದ ಸಂಗೀತ ಶಿಕ್ಷಣ ಪಡೆದರು. ಲತಾ ಅವರಿಗೆ ಶಾಸ್ತ್ರೀಯಸಂಗೀತದ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ ತೀರಿಕೊಂಡ ಸಮಯದಲ್ಲಿ 4 ಜನ ತಂಗಿಯರು ಮತ್ತು ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾದ ಜವಾಬ್ಧಾರಿ ಇನ್ನೂ 12-13 ವರ್ಷದ ಬಾಲಕಿ ಲತಾ ಹೆಗಲಿಗೆ ಬಂತು.ಲತಾ ಅವರು 1942ರಲ್ಲಿ ಮರಾಠಿ ಚಿತ್ರ ‘ಕಿತೀ ಹಸಾಲ್’ನಲ್ಲಿ ಒಂದು ಹಾಡು ಹಾಡಿದರಾದರೂ ಆ ಹಾಡು ಚಿತ್ರಕ್ಕೆ ಸೇರ್ಪಡೆಗೊಳ್ಳಲಿಲ್ಲ. ಅವರು ‘ಮಂಗಳಗೌರ್’ ಎಂಬ ಚಿತ್ರದಲ್ಲಿ ನಟಿಸಿದ್ದರು. 1947ರಲ್ಲಿ ಮೊದಲಬಾರಿಗೆ ಹಿಂದೀ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಿದರು. ‘ಆಪ್ ಕಿ ಸೇವಾಮೆ’, ‘ಪಾಂ ಲಾಗೂ ಕರ್ ಚೋರಿರೇ..’, ‘ಹುಸ್ನ್ ಲಾಲ್ ಭಗತ್ ರಾಮ್’ ಮುಂತಾದ ಹಾಡುಗಳಲ್ಲಿ ಆಕೆಯ ಕಂಠಶ್ರೀಯನ್ನು ಕೇಳಿ ಮಾರುಹೋದ ಚಿತ್ರೋದ್ಯಮ ಅವರ ಗಾಯನದ ಪ್ರಯೋಜನ ಪಡೆಯಲು ನಾ ಮುಂದು, ತಾ ಮುಂದು ಎಂದು ಅವರ ಸುತ್ತ ತಿರುಗತೊಡಗಿತು.ಲತಾ ಅವರು ಹಾಡಿರುವ ಚಿತ್ರಗೀತೆ, ಭಕ್ತಿಗೀತೆ ಹಾಗೂ ವಿಭಿನ್ನ ರೀತಿಯ ಗೀತೆಗಳ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಥಹ ಸಂಖ್ಯಾಶಾಸ್ತ್ರಜ್ಞನಿಗೂ ಮೀರಿದ ಸಾಹಸ. ಸಾಗರದ ಆಳ ವಿಸ್ತಾರಗಳನ್ನು ಹೇಗೆ ತಾನೇ ಅಳೆಯಲಾದೀತು. ಲತಾಜಿ ಅವರ ಗಾನದ ಸೊಗಸನ್ನು ಇಂತಿಂಥ ಹಾಡುಗಳಿಗೆ ಎಂದು ಮಾತ್ರ ನೆನೆಪಿಸಿಕೊಳ್ಳುವುದಾದರೂ ಹೇಗೆ. ಎಲ್ಲಾ ರೀತಿಯಲ್ಲೂ ಗಾನಶ್ರೇಷ್ಠತೆಯನ್ನು ಮೆರೆದ ಈ ಗಾನಗಂಗೆ ನಡೆಸಿದ ಮತ್ತು ಬದುಕಿರುವ ಸಂಗೀತ ತಪಸ್ಸು ಅನನ್ಯವಾದದ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು.

Mon Feb 6 , 2023
ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು. ಹಾಸ್ಯನಟರಾಗಿ ಬಂದ ಶರಣ್ ತಾವೇ ಚಿತ್ರ ನಿರ್ಮಿಸುವುದರ ಮೂಲಕ ತಮಗಿಷ್ಟವಾದ ಪಾತ್ರಗಳ ಚಿತ್ರ ನಿರ್ಮಿಸಿ ಗೆದ್ದವರು. ಹಿನ್ನೆಲೆ ಗಾಯಕರಾಗಿಯೂ ಹೆಸರಾದವರು. ಶರಣ್ 1972ರ ಫೆಬ್ರವರಿ 6ರಂದು ಗುಲ್ಬರ್ಗಾದಲ್ಲಿ ಜನಿಸಿದರು. ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಪ್ರಖ್ಯಾತ ನಟಿ ಶ್ರುತಿ ಶರಣ್ ಅವರ ಸಹೋದರಿ.ಚಿತ್ರರಂಗಕ್ಕೆ ಬರುವ ಮುನ್ನ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಶರಣ್ ಒಂದು ವಾದ್ಯಗೋಷ್ಠಿಯ ತಂಡದಲ್ಲಿ […]

Advertisement

Wordpress Social Share Plugin powered by Ultimatelysocial