ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರೆದ ಮಹತ್ವದ ಲೇಖಕರಲ್ಲಿ ಜೆ. ಆರ್. ಲಕ್ಷಣರಾವ್ ಪ್ರಮುಖರು.
ಲಕ್ಷ್ಮಣರಾವ್ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 1921ರ ಜನವರಿ 21 ರಂದು ಜನಿಸಿದರು. ತಂದೆ ರಾಘವೇಂದ್ರರಾವ್. ತಾಯಿ ನಾಗಮ್ಮ. ಲಕ್ಷ್ಮಣರಾಯರ ಪ್ರಾರಂಭಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಾದ ಜಗಳೂರಿನಲ್ಲಿ ನಡೆಯಿತು. ಹೈಸ್ಕೂಲಿಗೆ ಸೇರಿದ್ದು ದಾವಣಗೆರೆಯಲ್ಲಿ. ಮೈಸೂರಿನ ಇಂಟರ್ ಮೀಡಿಯೆಟ್ ಕಾಲೇಜ್ (ಇಂದಿನ ಯುವರಾಜ ಕಾಲೇಜ್)ನಿಂದ ಇಂಟರ್ ಮೀಡಿಯೆಟ್ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಎಂ.ಎಸ್ಸಿ ಪದವಿಗಳನ್ನು ಗಳಿಸಿದರು. ತುಮಕೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಹೊರತಂದ ಇಂಗ್ಲಿಷ್ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಹೀಗೆ ವೈವಿಧ್ಯಮಯ ಸೇವೆ ಸಲ್ಲಿಸಿದರು.
ಜೆ. ಆರ್. ಲಕ್ಷ್ಮಣರಾಯರು ವಿಜ್ಞಾನದ ಬೋಧನೆಯ ಜೊತೆಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡು ಬರೆದ ಮೊದಲ ಪುಸ್ತಕ ‘ಆಹಾರ’ (1944). ಎರಡನೆಯದು ಪರಮಾಣು ಚರಿತ್ರೆ (1949). ಹೀಗೆ ಬರವಣಿಗೆಯನ್ನು ಪ್ರಾರಂಭಿಸಿದ ಲಕ್ಷ್ಮಣರಾಯರು ರೂಢಿಸಿಕೊಂಡದ್ದು ಜನಸಾಮಾನ್ಯರಿಗೂ ಅರ್ಥವಾಗುವಂತಹ ಭಾಷೆ ಮತ್ತು ಶೈಲಿ.
ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂಬ ದೃಷ್ಟಿಯಿಂದ ಪ್ರಾರಂಭವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾಗಿ ಎಂಟುವರ್ಷಕಾಲ ಉಪಾಧ್ಯಕ್ಷರಾಗಿ, ಎರಡು ವರ್ಷಕಾಲ ಅಧ್ಯಕ್ಷರಾಗಿ ಮತ್ತು ವಿಜ್ಞಾನ ಪರಿಷತ್ತು ನಡೆಸುವ ವಾರ್ಷಿಕ ಜನಪ್ರಿಯ ವಿಜ್ಞಾನ ಲೇಖಕರ ಕಾರ್ಯ ಶಿಬಿರಗಳ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅವರು ಅಮೂಲ್ಯ ಸೇವೆ ಸಲ್ಲಿಸಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಬುದ್ಧ ಕರ್ನಾಟಕದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ (1969) ಹೊರತಂದ ವಿಜ್ಞಾನಾಂಕ ವಿಶೇಷ ಸಂಚಿಕೆಯ ಸಂಪಾದಕರಾಗಿ, ವಿಜ್ಞಾನ ಕರ್ನಾಟಕದ ತ್ರೈಮಾಸಿಕದ ಸಂಪಾದಕರಾಗಿ, ವಿಜ್ಞಾನ ಪರಿಷತ್ತು ನಡೆಸುತ್ತಿದ್ದ ಬಾಲವಿಜ್ಞಾನ ಮಾಸಪತ್ರಿಕೆಯ ಸಂಪಾದಕರಾಗಿ ಹತ್ತು ವರ್ಷಕಾಲ, ವಿಜ್ಞಾನ ಪರಿಷತ್ತು ಹೊರತಂದ ‘ಇಪ್ಪತ್ತು ವಿಜ್ಞಾನಿಗಳು’ ಸಂಕಲನಗಳ ಸಂಪಾದಕರಾಗಿ, ಇಂಗ್ಲಿಷ್ ಕನ್ನಡ ವಿಜ್ಞಾನ ಶಬ್ದಕೋಶದ ಸಂಪಾದಕರಲ್ಲೊಬ್ಬರಾಗಿ (ಕೃಷ್ಣಭಟ್ಟರೊಡನೆ) ಮತ್ತು ಮೈಸೂರು ವಿಶ್ವವಿದ್ಯಾಲಯದ ನಿಘಂಟು ಪರಿಷ್ಕರಣಾ ಯೋಜನೆಯಲ್ಲಿ ಹೀಗೆ ಲಕ್ಷ್ಮಣರಾಯರು ಅನೇಕ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannad
Please follow and like us: