ಭದ್ರಾವತಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಆ ಮನೆಯವರೆಲ್ಲೂ ಮದ್ವೆ ಸಂಭ್ರಮದಲ್ಲಿ ಮಿಂದೇಳುತ್ತಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು… ಮದುವೆ ಚಪ್ಪರದ ಶಾಸ್ತ್ರ ಮುಗಿಸಿ ಇನ್ನೇನು ಕಲ್ಯಾಣ ಮಂಟಪಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ದುರಂತ ಸಂಭವಿಸಿದೆ.ವರನ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಾವನ ಸಾವಿನ ಸುದ್ದಿ ಕೇಳಿ ಅತ್ತ ಮದುಮಗಳೂ ಆಘಾತಗೊಂಡಿದ್ದಾಳೆ… ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂತಹ ಮನಕಲಕುವ ಘಟನೆ ಭದ್ರಾವತಿಯಲ್ಲಿ ಸಂಭವಿಸಿದ್ದು, ಸ್ಥಳೀಯರು, ಸಂಬಂಧಿಕರೂ ಮರುಕಪಡುತ್ತಿದ್ದಾರೆ.ಭದ್ರಾವತಿ ನಗರದ ಉಜ್ಜನೀಪುರದ ಕೃಷಿಕ ಬೋರೇಗೌಡರ ಮಗನ ಮದುವೆ ಶಿವಮೊಗ್ಗ ಸಿದ್ರಹಳ್ಳಿಯ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಅದರಂತೆ ಫೆ.9 ಮತ್ತು 10ರಂದು ನಿಗದಿಯಾಗಿದ್ದ ಶಿವಮೊಗ್ಗದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲ ಸಿದ್ಧತೆಯೂ ನಡೆದಿತ್ತು. ನಿನ್ನೆ(ಫೆ.9) ರಾತ್ರಿ ಆರತಕ್ಷತೆ, ಇಂದು ಧಾರಾಮುಹೂರ್ತ ಇತ್ತು. ನಿನ್ನೆ ಮದುವೆ ಚಪ್ಪರದ ಶಾಸ್ತ್ರ ಮುಗಿಸಿ ಇನ್ನೇನು ಕಲ್ಯಾಣ ಮಂಟಪಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ವರನ ತಂದೆ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.ಆರತಕ್ಷತೆಗೆ ಕಲ್ಯಾಣ ಮಂಟಪಕ್ಕೆ ಹೋಗಲು ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಸಿದ್ಧತೆ ನಡುವೆ ಸುಸ್ತಾಗಿದ್ದ ಬೋರೇಗೌಡರಿಗೆ ಮಧ್ಯಾಹ್ನ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಸಂಬಂಧಿಗಳು ಆವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮದ್ವೆಗೆ ಚಪ್ಪರ ಹಾಕಿದ್ದ ಉಜ್ಜನೀಪುರದ ವರನ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದ್ದು ಮದುವೆಯನ್ನು ಮುಂದೂಡಲಾಗಿದೆ. ಮಗನ ಮದ್ವೆ ಕಣ್ತುಂಬಿಕೊಳ್ಳುವ ಮೊದಲೇ ಸಾವಿಗೀಡಾದ ತಂದೆಯ ಮೃತದೇಹದ ಎದುರು ಕುಟುಂಬಸ್ಥರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಅಯ್ಯೋ ವಿಧಿಯೇ… ಇನ್ನೊಂದು ದಿನವಾದರೂ ಅವರನ್ನ ಬದಕಲು ಬಿಟ್ಟಿದದ್ದರೆ ಮಗನ ಮದ್ವೆಯನ್ನಾದರೂ ಕಣ್ತುಂಬಿಕೊಳ್ಳುತ್ತಿದ್ದರು… ಮಗ-ಸೊಸೆಗೆ ಧಾರೆ ಮಾಡಿ ಆಶೀರ್ವದಿಸುತ್ತಿದ್ದರು… ಎಲ್ಲಕ್ಕೂ ಕೊಳ್ಳಿ ಇಟ್ಟೆಯಲ್ಲಾ… ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಲೇ ಬೋರೇಗೌಡರ ಸಾವಿಗೆ ಮರುಗಿದರು.ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ. ಬೋರೇಗೌಡ ಈ ಬಾರಿ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada