ಮುಂಬೈ: ಮಹಾರಾಷ್ಟ್ರದ ಮುಂಬೈ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾಡಿ (VBA) ಜತೆ ಮೈತ್ರಿ ) ಮಾಡಿಕೊಂಡಿದ್ದಾರೆ.
ಸ್ಥಳೀಯ ಚುನಾವಣೆಗೂ ಮುನ್ನ ಇದು ಮಹತ್ತರ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.
ಕಳೆದ ವರ್ಷ ಏಕನಾಥ್ ಶಿಂಧೆ ಅವರು ಶಿವಸೇನೆಯಿಂದ ಹೊರಬಂದು ಹೊಸದೊಂದು ಬಣ (ಬಾಳಾಸಾಹೇಬಂಚಿ ಶಿವಸೇನೆ-BSS) ರಚಿಸಿದ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿರುವುದರಿಂದ ಉದ್ಧವ್ ಠಾಕ್ರೆ ಅವರು ಮೈತ್ರಿ ಘೋಷಿಸಿರುವುದು ಪ್ರಾಮುಖ್ಯತೆ ಪಡೆದಿದೆ.
“ಬಾಳಾಸಾಹೇಬ್ ಠಾಕ್ರೆ ಅವರ ಜನ್ಮದಿನವಾದ ಇಂದು (ಜನವರಿ 23) ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಳ್ಳಲಾಗಿದೆ. ನಮಗೆ ಹಲವು ನಾಯಕರು ಬೆಂಬಲ ವ್ಯಕ್ತಪಡಿಸಿರುವುದು ಸಂತಸ ತಂದಿದೆ” ಎಂದು ಉದ್ಧವ್ ಠಾಕ್ರೆ ತಿಳಿಸಿದರು.
ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಳೆದ 30 ವರ್ಷದಿಂದ ಶಿವಸೇನೆಯೇ ಆಡಳಿತ ನಡೆಸುತ್ತಿದೆ. ಆದರೆ, ಈ ಬಾರಿ ಪಕ್ಷವು ವಿಘಟನೆಯಾಗಿರುವ ಕಾರಣ ಶಿವಸೇನೆಯ ಪ್ರಾಬಲ್ಯ ಕುಗ್ಗಿದೆ. ಹಾಗಾಗಿಯೇ, ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಹಾನಗರ ಪಾಲಿಕೆಯ ಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ.
https://play.google.com/store/apps/details?id=com.speed.newskannada