ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೈಸೂರು ನಗರ ಪೊಲೀಸರು, ಏಳು ಮಂದಿ ಸುಲಿಗೆಕೋರರನ್ನು ಬಂಧಿಸಿದ್ದಾರೆ ಲಷ್ಕರ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಬಂಧಿತರಿಂದ 22,000 ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ನ. 20 ರಂದು ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಮಡಿಕೇರಿಗೆ ಹೋಗುವ ಸಲುವಾಗಿ ವ್ಯಕ್ತಿಯೊಬ್ಬರು ಬಿ.ಎನ್. ರಸ್ತೆ ಮೈಸೂರು ಕಾಂಪ್ಲೆಕ್ಸ್ ಹತ್ತಿರ ನಡೆದುಕೊಂಡು ಹೋಗುವಾಗ ಒಂದು ಆಟೋದಲ್ಲಿ ಬಂದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು, ವ್ಯಕ್ತಿಗೆ ಹೊಡೆದು, ಕೆಳಗೆ ಬೀಳಿಸಿ ಆತನ ಪ್ಯಾಂಟ್ ಜೇಬಿನಲ್ಲಿದ್ದ 25,000 ರೂ. ಹಣವನ್ನು ಬಲವಂತವಾಗಿ ಕಿತ್ತುಕೊಂಡು ಆಟೋದಲ್ಲಿ ಹೊರಟು ಹೋಗಿದ್ದು, ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಳೆಯ ಅಪರಾಧಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಡಿ.14 ರಂದು ರಾತ್ರಿ 7.30 ರ ಸಮಯದಲ್ಲಿ ಬಿ.ಎನ್.ರಸ್ತೆಯ ಸೆಂಟ್ರಲ್ ಮಾಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು 3-4 ಜನ ಆಟೋದಲ್ಲಿ ಬಂದು ಅಡ್ಡ ಹಾಕಿ, ಕುತ್ತಿಗೆಗೆ ಟವಲ್ನಿಂದ ಬಿಗಿದು, ಹಲ್ಲೆ ನಡೆಸಿ ಪ್ಯಾಂಟ್ ಜೇಬಿನಲ್ಲಿದ್ದ 6700 ರೂ. ಹಣ ಮತ್ತು ಒಂದು ಮೊಬೈಲ್ ಫೋನನ್ನು ಕಿತ್ತುಕೊಂಡು ಆಟೋದಲ್ಲಿ ಪರಾರಿಯಾಗಿದ್ದರು. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆಯ ನಡೆಸಿದ ಪೊಲೀಸರು, ಡಿ. 15 ರಂದು ಒಬ್ಬ ಹಳೆಯ ಅಪರಾಧಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.ಈ ಪತ್ತೆ ಕಾರ್ಯವನ್ನು ಡಿಸಿಪಿ ಎಂ.ಎಸ್.ಗೀತ, ದೇವರಾಜ ವಿಭಾಗದ ಎಸಿಪಿ ಎಂ.ಎನ್. ಶಶಿಧರ್ ಮಾರ್ಗದರ್ಶನದಲ್ಲಿ ಲಷ್ಕರ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪಿ.ಪಿ. ಸಂತೋಷ್, ಎಸ್ಐ ಧನಲಕ್ಷ್ಮೀ ಮತ್ತು ಸಿಬ್ಬಂದಿ ಪಿ.ಚೇತನ್, ಮರಿಸ್ವಾಮಿ, ಮಂಜುನಾಥ ಗದಗೈಗೋಳ, ಲಾಳೇಸಾಬ್ ನದಾಫ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada