ಮುಂಬೈ: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ ಬೆನ್ನಲ್ಲೇ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ನಟಿ ಕಂ ರಾಜಕಾರಣಿ ನಗ್ಮಾ ಸೋಮವಾರ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ದೇಶಿಸಿ ನಗ್ಮಾ ಟ್ವೀಟ್ ಮಾಡಿದ್ದಾರೆ.
ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ ಅವರ ಇಚ್ಛೆಯಂತೆ ನಾನು 2003-04ರಲ್ಲಿ ಕಾಂಗ್ರೆಸ್ಗೆ ಸೇರಿದಾಗ ರಾಜ್ಯಸಭೆಯಲ್ಲಿ ಟಿಕೆಟ್ ನೀಡುವುದಾಗಿ ವೈಯಕ್ತಿಕವಾಗಿ ಬದ್ಧವಾಗಿದ್ದರು. ಆವಾಗ ನಾವು ಅಧಿಕಾರದಲ್ಲಿ ಇರಲಿಲ್ಲ. ಅಂದಿನಿಂದ ಇಲ್ಲಿಯವರಗೆ 18 ವರ್ಷಗಳು ಕಳೆದಿವೆ. ಆದರೆ, ಒಂದೇ ಒಂದು ಅವಕಾಶವನ್ನು ನನಗೆ ನೀಡಿಲ್ಲ. ಮಹಾರಾಷ್ಟ್ರದ ಮಿಸ್ಟರ್ ಇಮ್ರಾನ್ ಅವರಿಗೆ ಟಿಕೆಟ್ ನೀಡಿದ್ದಾರೆ. ನಾನು ಕಡಿಮೆ ಅರ್ಹಳೇ ಎಂದು ಕೇಳುತ್ತೇನೆ ಎನ್ನುವ ಮೂಲಕ ನಗ್ಮಾ ಬೇಸರ ಹೊರಹಾಕಿದ್ದಾರೆ.
ಇಮ್ರಾನ್ ಭಾಯ್ ಮುಂದೆ ನನ್ನ 18 ವರ್ಷಗಳ ತಪಸ್ಸು ಕೂಡ ಕಡಿಮೆ ಆಯಿತು ಎಂದು ನಗ್ಮಾ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಜೂನ್ 10ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಏಳು ರಾಜ್ಯಗಳಿಂದ ಆಯ್ಕೆ ಮಾಡಲಾದ 10 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಭಾನುವಾರ ಘೋಷಣೆ ಮಾಡಿದೆ. ಹಲವು ಪ್ರಮುಖ ನಾಯಕರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿರುವುದು ಪಕ್ಷದಲ್ಲಿ ಅಸಮಾಧಾನದ ಹೊಗೆ ಆಡಲು ಶುರುವಾಗಿದೆ.
ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ರಾಜಸ್ಥಾನದ ರಾಜ್ಯಸಭಾ ಅಭ್ಯರ್ಥಿಗಳಾಗಿ ಮಾಡಲಾಗಿದೆ. ಆದರೆ, ಈ ಮೂವರೂ ನಾಯಕರು ಕೂಡ ರಾಜಸ್ಥಾನಕ್ಕೆ ಸೇರಿದವರಲ್ಲ. ಇದರ ವಿರುದ್ಧ ರಾಜಸ್ಥಾನದ ಸಿರೋಹಿಯ ಕಾಂಗ್ರೆಸ್ ಶಾಸಕ ಸಂಯಮ್ ಲೋಧಾ ಅವರು ಪ್ರಶ್ನೆ ಮಾಡಿದ್ದಾರೆ. ರಾಜಸ್ಥಾನದ ಯಾವುದೇ ಕಾಂಗ್ರೆಸ್ ನಾಯಕ/ಕಾರ್ಯಕರ್ತರನ್ನು ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡದಿರಲು ಕಾರಣವೇನು ಎಂಬುದನ್ನು ಕಾಂಗ್ರೆಸ್ ಪಕ್ಷವೇ ಹೇಳಬೇಕು ಎಂದು ಸಂಯಮ್ ಲೋಧಾ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
ಅನುಭವಿಗಳಾದ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಅವರಿಗೆ ಅವಕಾಶ ಸಿಗುತ್ತದೆ ಎಂಬ ಮಾತಿಗೆ ವಿರುದ್ಧವಾಗಿ ರಾಜ್ಯಸಭಾ ಚುನಾವಣೆಗೆ ಇಮ್ರಾನ್ ಪ್ರತಾಪ್ಗರ್ಹಿ ಮತ್ತು ರಂಜೀತ್ ರಂಜನ್ ಅವರಂತಹ ಸಾಮಾನ್ಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಪಕ್ಷದ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಕವಿಯಾಗಿರುವ ಇಮ್ರಾನ್ ಅವರನ್ನು ಮಹಾರಾಷ್ಟ್ರದಿಂದ ಕಣಕ್ಕಿಳಿಸಲಾಗಿದೆ. ಇದು ನಗ್ಮಾ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದಲ್ಲಿ 18 ವರ್ಷದಿಂದ ಇದ್ದರು ನಮಗೆ ಬೆಲೆ ಸಿಕ್ಕಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada