ಬೆಂಗಳೂರು, ಜನವರಿ 21: ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆಯುವಲ್ಲಿ ಮೂರು ಪಕ್ಷಗಳು ಹಲವಾರು ಕಸರತ್ತು ನಡೆಸಿವೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರತವಾಗಿದೆ.
ಕಾಂಗ್ರೆಸ್ ಪಕ್ಷವು ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡಿದೆ. ಈ ಬಾರಿಯ ಚುನಾವಣೆ ಮೂರು ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಲಿದೆ. ಈಗಾಗಲೇ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಇತ್ತ ಕಾಂಗ್ರೆಸ್ನಿಂದಲೂ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಜೆಡಿಎಸ್ ಪಕ್ಷವು ಹಲವು ಸಾರ್ವಜನಿಕ ಸಭೆಗಳನ್ನು ನಡೆಸಿದೆ. ಈ ಬಾರಿ ಆಮ್ ಆದ್ಮಿ ಪಕ್ಷವು ತನ್ನ ಬಲವನ್ನು ಪ್ರದರ್ಶನ ಮಾಡಲಿದೆ. ಜನಾರ್ಧನ ರೆಡ್ಡಿ ನೇತೃತ್ವದ ಪಕ್ಷವು ಈ ಸಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.
ಕರ್ನಾಟಕ ಚುನಾವಣೆ: ಸಮೀಕ್ಷೆ ಹೇಳಿದ್ದೇನು?ಸ್ವತಂತ್ರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ 108 ರಿಂದ 114 ಸೀಟುಗಳನ್ನು ಗೆಲ್ಲಲಿದೆ. ಆಡಳಿತಾರೂಢ ಬಿಜೆಪಿ 65 ರಿಂದ 75 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಜೆಡಿಎಸ್ 24-34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಆಮ್ ಆದ್ಮಿ ಪಕ್ಷಕ್ಕೆ ಯಾವುದೇ ಸ್ಥಾನ ಬರುವುದಿಲ್ಲವೆಂದು ಹೇಳಿದೆ.
ಹೈದರಾಬಾದ್ ಮೂಲದ ಸಂಸ್ಥೆಯಿಂದ ಸಮೀಕ್ಷೆ
ನವೆಂಬರ್ 20 ರಿಂದ ಜನವರಿ 15 ರ ವರೆಗೆ ಕರ್ನಾಟಕದಲ್ಲಿ IPSS ತಂಡದ ಸಹಯೋಗದೊಂದಿಗೆ ಹೈದರಾಬಾದ್ನ SAS ಗುಂಪು ನಡೆಸಿದ ಸಮೀಕ್ಷೆಯು ಕಾಂಗ್ರೆಸ್ ತನ್ನ ಮತಗಳನ್ನು ಶೇಕಡಾ 38.14 ರಿಂದ ಶೇಕಡಾ 40 ಕ್ಕೆ (+1.86%) ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದೆ. 36.35 ಪ್ರತಿಶತದಿಂದ 34 ಪ್ರತಿಶತಕ್ಕೆ (- 2.35%) ಕುಸಿತವನ್ನು ಬಿಜೆಪಿ ಕಾಣಲಿದೆ. ಜೆಡಿಎಸ್ ಕೂಡ 1.3 ಪರ್ಸೆಂಟ್ ಇಳಿಕೆಯೊಂದಿಗೆ 18.3 ಪರ್ಸೆಂಟ್ನಿಂದ 17 ಪರ್ಸೆಂಟ್ಗೆ ಕುಸಿಯಬಹುದು ಎಂದು ಅದು ಹೇಳಿದೆ. ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು ಶೇಕಡಾ 6 ರಷ್ಟು ಗಳಿಸಬಹುದು. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಏಳು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಬೆಂಗಳೂರು ನಗರದ ಸಮೀಕ್ಷೆ
ಬೆಂಗಳೂರು ನಗರದಲ್ಲಿ 13ರಿಂದ 14 ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ. ಬಿಜೆಪಿಯಿಂದ ಕೇವಲ 9ರಿಂದ 10 ಸದಸ್ಯರು ಆಯ್ಕೆಯಾಗಬಹುದು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದ್ದು, ಕೇವಲ 10ರಿಂದ 14 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 24 ರಿಂದ 25 ಸ್ಥಾನಗಳನ್ನು ಗಳಿಸಬಹುದು, ಜೆಡಿಎಸ್ 21 ರಿಂದ 22 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
https://play.google.com/store/apps/details?id=com.speed.newskannad