ರಂಗನಾಥ ಶ್ರೀನಿವಾಸ ಮುಗಳಿಯವರು ಕನ್ನಡ ಸಾಹಿತ್ಯ ಲೋಕದ ಪ್ರಮುಖ ವಿದ್ವಾಂಸರ ಸಾಲಿಗೆ ಸೇರಿದವರು. ಮುಗಳಿಯವರು ತಮ್ಮ ಪ್ರಾರಂಭದ ಹೆಸರಾದ ರಂಗನಿಗೆ ರಸಿಕತೆಯ ಲೇಪವನ್ನು ಹಚ್ಚಿ ‘ರಸಿಕ ರಂಗ’ ಎಂದು ತಮ್ಮಲ್ಲಿನ ಬರವಣಿಗೆಗಾರನ ಹೆಸರನ್ನಾಗಿ ಮಾಡಿಕೊಂಡರು.ರಂ.ಶ್ರೀ. ಮುಗಳಿಯವರು 1906ರ ಜುಲೈ 15ರಂದು ರೋಣ ತಾಲೂಕಿನ ಹೊಳೆ ಆಲೂರಿನಲ್ಲಿ ಜನಿಸಿದರು. ಮುಗಳಿಯವರ ತಂದೆ ಅಂದಿನ ಪ್ರಸಿದ್ಧ ವಕೀಲರಾಗಿದ್ದರು. ಜೊತೆಗೆ ಅಂದಿನ ಮರಾಠಿ ವಾತಾವರಣದಲ್ಲಿ ಕನ್ನಡದ ನಾಟಕಗಳನ್ನು ಆಡಿಸುವುದರಲ್ಲಿ ಅವರಿಗೆ ಎಲ್ಲಿಲ್ಲದ ಪ್ರೀತಿ. ತಂದೆಯಲ್ಲಿದ್ದ ಸಾಹಿತ್ಯದ ಆಸಕ್ತಿಗಳು ಮಗನಲ್ಲಿ ವಿಸ್ತೃತವಾಗಿ ಬೆಳೆದವು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸದಾ ಔನ್ನತ್ಯದ ಸಾಧನೆಗಳನ್ನು ತೋರಿದ ಮುಗಳಿಯವರು 1933ರಲ್ಲಿ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು 1961ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ 1966ರಲ್ಲಿ ನಿವೃತ್ತರಾದರು. 1967ರಿಂದ 1970ರ ವರೆಗೆ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಅವರಿಗೆ ಬೇಂದ್ರೆಯವರ ಮೋಡಿ ಅಪಾರವಾಗಿದ್ದು ಬೇಂದ್ರೆಯವರ ಆಪ್ತ ಬಳಗದಲ್ಲಿ ಸದಾ ವಿಜ್ರಂಭಿಸುತ್ತಿದ್ದರು.ಶಿಕ್ಷಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಮುಗಳಿಯವರು ಗೆಳೆಯರ ಗುಂಪಿನ ಸಹಚರ್ಯದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿ ಅನೇಕ ಅಮೂಲ್ಯ ಗ್ರಂಥಗಳ ಬೆಳೆಯನ್ನು ತೆಗೆದಿದ್ದಾರೆ. ಇವರ ‘ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಗ್ರಂಥ ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಒಂದು ಮಹತ್ವದ ಕೃತಿ. ಈ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಾಚೀನ ಕಾಲದಿಂದ ಮುದ್ದಣನವರೆಗಿನ ಸಾಹಿತ್ಯ ವಿಚಾರ ಚರ್ಚಿತವಾಗಿದೆ.
‘ರನ್ನನ ಕೃತಿರತ್ನ’, ‘ತವನಿಧಿ’, ‘ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು’, ‘ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ’ ಮುಂತಾದ ವಿದ್ವತ್ ಪೂರ್ಣ ವಿಮರ್ಶಾ ಕೃತಿಗಳೊಂದಿಗೆ ಮುಗಳಿಯವರು ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ಕ್ಷೇತ್ರಗಳಲ್ಲೂ ದುಡಿದಿದ್ದಾರೆ.‘ಬಾಸಿಗ’, ‘ಅಪಾರಕರುಣೆ’, ‘ಓಂ ಅಶಾಂತಿ’, ‘ಮಂದಾರಹೂ’ ರಸಿಕ ರಂಗರ ಹೆಸರಾಂತ ಕವನ ಸಂಗ್ರಹಗಳು. ನಿಸರ್ಗ ಕವಿತೆಗಳನ್ನು ಬಿಟ್ಟರೆ ಉಳಿದ ಕವಿತೆಗಳಲ್ಲಿ ಸೌಂದರ್ಯಪ್ರೀತಿ, ಆದರ್ಶಹಂಬಲ, ಗೆಳೆತನ, ಪ್ರಣಯ, ದೇವರ ಕರುಣೆ, ಇಂಥ ಭಾವಗೋಚರವಾದ ವಸ್ತುಗಳೇ ದೊರೆಯುತ್ತವೆ. ಓಂ ಅಶಾಂತಿ, ಅಪಾರಕರುಣೆ ಈ ಸಂಗ್ರಹಗಳಲ್ಲಿ ಜೀವನದ ಬಿರುಸಾದ ಸತ್ಯವನ್ನು ಕವಿ ಎದುರಿಸಿದ್ದರೂ ಮನೋಧರ್ಮದ ಕೋಮಲತೆ ಕಡಿಮೆಯಾಗಿಲ್ಲದಿರುವುದನ್ನು ಕಾಣುತ್ತೇವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: