ನಟ ರವಿಚಂದ್ರನ್ ಮಾತುಗಳು ಸಿಡಿಗುಂಡುಗಳಿದ್ದಂತೆ. ಯಾರಿಗೂ ಹೆದರಿದವರೂ ಅಲ್ಲ, ಹೆದರುವವರೂ ಅಲ್ಲ. ಯಾರೇ ಎದುರಿಗಿರಲಿ ತಮಗೆ ಸರಿ ಅನಿಸಿದ್ದನ್ನು ಹೇಳಿಯೇ ತೀರುವವರವರು.
ಸಿನಿಮಾ ಅಪರಿಮಿತ ಪ್ರೇಮವುಳ್ಳ ರವಿಚಂದ್ರನ್ಗೆ ಚಿತ್ರರಂಗ ಕಲಿಸಿರುವ ಪಾಠಗಳು ಅನೇಕ.
ಕಲಿತ ಪಾಠಗಳಿಂದಾಗಿ ದೊಡ್ಡ ಅನುಭವದ ಅಕ್ಷಯ ಪಾತ್ರೆಯೇ ಆಗಿದ್ದಾರೆ ಅವರು. ಯಾವುದೇ ಸಂದರ್ಶನಗಳಿಗೆ ಹೋದರು, ಸಿನಿಮಾ ಕಾರ್ಯಕ್ರಮಗಳಿಗೆ ಹೋದರು ಅಲ್ಲಿ ಹೈಲೇಟ್ ಆಗುವುದು ರವಿಚಂದ್ರನ್.
ಹಲವು ದಶಕಗಳಿಂದ ಸಿನಿಮಾ ರಂಗವನ್ನು ನೋಡುತ್ತಾ ಬಂದಿರುವ, ಸಿನಿಮಾಗಳನ್ನು ಮಾಡುತ್ತಾ ಬಂದಿರುವ ರವಿಚಂದ್ರನ್, ಹೊಸ ಹುಡುಗರ ಸಾಹಸಗಳಿಗೆ ಹೆಗಲು ನೀಡುತ್ತಿದ್ದಾರೆ. ಇತರ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳ ಯಶಸ್ಸಿಗೆ ಹೆಗಲು ನೀಡುತ್ತಿದ್ದಾರೆ. ಈಗಿನ ಹಲವು ಸ್ಟಾರ್ ನಟರ ನೆಚ್ಚಿನ ನಟರಾಗಿರುವ ರವಿಚಂದ್ರನ್ಗೆ ಈಗಿನ ಸ್ಟಾರ್ ನಟರಲ್ಲಿ ಹೆಚ್ಚು ಇಷ್ಟವಾಗುವುದು ಯಶ್ ಅಂತೆ. ಅದಕ್ಕೆ ಕಾರಣವೂ ಇದೆ.
ರವಿಚಂದ್ರನ್ಗೆ ಯಾವ ಸಿನಿಮಾ ನಟ ಇಷ್ಟ?
ನಿರೂಪಕಿ ಅನುಶ್ರೀ, ತಮ್ಮ ಯೂಟ್ಯೂಬ್ ಚಾನೆಲ್ ‘ಆಂಕರ್ ಅನುಶ್ರೀ’ಗಾಗಿ ನಡೆಸಿದ ವಿಶೇಷ ಕಾರ್ಯಕ್ರಮಕ್ಕೆ ನಟ ರಕ್ಷಿತ್ ಶೆಟ್ಟಿ ಹಾಗೂ ರವಿಚಂದ್ರನ್ ಅವರನ್ನು ಕರೆಸಿದ್ದರು. ಎಂದಿನಿಂತೆ ತಮ್ಮದೇ ಸ್ಟೈಲ್ನಲ್ಲಿ ಬಿಡು ಬೀಸಾಗಿ ಮಾತನಾಡುತ್ತಿದ್ದ ರವಿಚಂದ್ರನ್ ಅವರಿಗೆ ‘ಸರ್, ಈಗಿನ ಜನರೇಷನ್ನ ಯಾವ ನಟ ನಿಮಗೆ ಇಷ್ಟ?’ ಎಂದು ರಕ್ಷಿತ್ ಪ್ರಶ್ನಿಸಿದ್ದಾರೆ. ಅದಕ್ಕೆ ಮರು ಯೋಚನೆ ಇಲ್ಲದೆ, ಯಶ್ ಎಂದಿದ್ದಾರೆ ರವಿ ಚಂದ್ರನ್, ಮತ್ತು ಅದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದಾರೆ.
ಅವರ ಡೆಡಿಕೇಶನ್ ಸಿನಿಮಾ ಲವ್ ನನಗಿಲ್ಲ: ರವಿಚಂದ್ರನ್
ಏಕೆ ಯಶ್ ಎಂದರೆ ನಿಮಗೆ ಇಷ್ಟ? ಎಂಬ ಅನುಶ್ರೀಯ ಪ್ರಶ್ನೆಗೆ ಉತ್ತರಿಸಿದ ರವಿಚಂದ್ರನ್, ”ಅವರಿಗಿರುವ ಸಿನಿಮಾ ಪ್ರೀತಿ ಹಾಗೂ ಸಿನಿಮಾದ ಬಗ್ಗೆ ಇರುವ ತನ್ಮಯತೆ ಮತ್ತೊಬ್ಬ ನಟನಲ್ಲಿ ನಾನು ನೋಡಿಲ್ಲ ಆತ ನನಗೆ ಇಷ್ಟವಾಗಲು ಅದು ಮೊದಲ ಕಾರಣ. ನಾಲ್ಕು ಸಿನಿಮಾ ಮಾಡಿದರೆ ಒಂದಿಷ್ಟು ಕೋಟಿ ಬಂದು ಬಿಡುತ್ತದೆ ಎಂದು ಲೆಕ್ಕ ಹಾಕುತ್ತಿರುವ ಕಾಲದಲ್ಲಿ, ನಾನು ಇದೊಂದೇ ಸಿನಿಮಾಕ್ಕೆ ನಿಂತುಕೊಳ್ಳುತ್ತೀನಿ ಎಂಬ ಅವರ ಡೆಡಿಕೇಶನ್ ಅಸಾಮಾನ್ಯ” ಎಂದಿದ್ದಾರೆ ರವಿಚಂದ್ರನ್.
”ಅದ್ಭುತವಾದುದು ಕೊಡಬೇಕು ಎಂಬ ಛಲ ಯಶ್ಗಿದೆ”
”ಅವರು ‘ಕೆಜಿಎಫ್’ ಸಿನಿಮಾ ಮಾಡಿದ್ದಾರಲ್ಲ. ಆ ಕತೆಯನ್ನು ಯಾರಾದರೂ ಬ್ಯುಸಿನೆಸ್ ಯೋಚಿಸಿ ಬಂಡವಾಳ ಹಾಕುವ ನಿರ್ಮಾಪಕನಿಗೆ ಹೇಳಿದರೆ ಒಪ್ಪುವುದಿಲ್ಲ. ಅದು ಸಾಮಾನ್ಯ ಫಾರ್ಮುಲ ಬಿಟ್ಟ ಬೇರೆ ಮಾದರಿ ಸಿನಿಮಾ. ಅದೂ ಅಲ್ಲದೆ, ಜನರಿಗೆ, ಈ ಪರದೆಗೆ ನಾನು ಏನಾದರೂ ಭಿನ್ನವಾದುದು, ಅದ್ಭುತವಾದುದನ್ನು ಕೊಡಬೇಕು ಎಂಬ ಛಲ ಇದೆಯಲ್ಲ ಅದು ನಾನು ನೋಡಿದ್ದು ಯಶ್ ಅಲ್ಲಿ” ಎಂದಿದ್ದಾರೆ ರವಿಚಂದ್ರನ್.
ರಕ್ಷಿತ್ ಅನ್ನು ಹೊಗಳಿದ ರವಿಚಂದ್ರನ್
ಅಲ್ಲದೆ ಎದುರಿಗೆ ಕೂತಿದ್ದ ರಕ್ಷಿತ್ ಅವರನ್ನು ಹೊಗಳಿದ ರವಿಚಂದ್ರನ್, ಇವರಿಗೂ ಅದೇ ರೀತಿಯ ಛಲ ಇದೆ. ಸಿನಿಮಾ ಬಗ್ಗೆ ಪ್ರೀತಿ, ಡೆಡಿಕೇಶನ್ ಇದೆ. ಇವರುಗಳು ಗೆಲ್ಲಬೇಕು, ಇವರುಗಳು ಗೆದ್ದರೆ, ಸಿನಿಮಾ ಉದ್ಯಮ ಗೆಲ್ಲುತ್ತಾ ಹೋಗುತ್ತದೆ ಎಂದಿದ್ದಾರೆ. ನಾನು ಅಷ್ಟು ವರ್ಷಗಳ ಹಿಂದೆ ಕನಸುಗಳು ಈಗ ನನಸಾಗುತ್ತಿವೆ. ಎಲ್ಲ ಕನಸುಗಳನ್ನು ನಾನೇ ನನಸು ಮಾಡಿಕೊಳ್ಳಬೇಕು ಎಂದೇನೂ ಇಲ್ಲ, ಬೇರೆಯವರು ಮಾಡಿದಾಗ ನಾವು ಸಂತೋಷಿಸಬೇಕು” ಎಂದಿದ್ದಾರೆ ರವಿಚಂದ್ರನ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada