ಇನ್ನು ಕೆಲವೇ ದಿನ ಕಳೆದರೆ ಪುನೀತ್ ರಾಜ್ಕುಮಾರ್ ಅಗಲಿ ಮೂರು ತಿಂಗಳಾಗುತ್ತೆ. ಇಷ್ಟರಲ್ಲೇ ಅಪ್ಪು ಬಗ್ಗೆ ಗೊತ್ತಿಲ್ಲದ ಅದೆಷ್ಟು ಸಂಗತಿಗಳು ಹೊರಬೀಳುತ್ತಿವೆ. ಪುನೀತ್ ರಾಜ್ ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ಕೇಳಿ ಅವರ ಅಭಿಮಾನಿಗಳೇ ದಂಗಾಗಿ ಹೋಗಿದ್ದಾರೆ.
ಯಾರಿಗೂ ಗೊತ್ತಿಲ್ಲದಂತೆ ಅವರು ಕಷ್ಟಗಳಿಗೆ ನೆರವಾಗಿದ್ದು ಕೇಳಿ ಕರ್ನಾಟಕದ ಜನತೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇಂತಹ ಉತ್ತಮ ವ್ಯಕ್ತಿತ್ವದ ಅಪ್ಪು ಇಷ್ಟು ಬೇಗ ಬಿಟ್ಟು ಹೋಗಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಅಪ್ಪು ಮಾಡಿದ ಸಮಾಜ ಸೇವೆ ಬೆಳಕಿಗೆ ಬರುತ್ತಿದ್ದರೆ, ಇನ್ನೊಂದು ಕಡೆ ಅವರ ಒಪ್ಪಿಕೊಂಡಿದ್ದ ಸಿನಿಮಾಗಳ ಬಗ್ಗೆ ಒಂದೊಂದೇ ವಿಷಯವೂ ರಿವೀಲ್ ಆಗುತ್ತಿದೆ. ‘ಬೆಲ್ ಬಾಟಂ’ ಸಿನಿಮಾದ ನಿರ್ದೇಶಕ ಜಯತೀರ್ಥ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೊಂದು ಕಥೆ ಹೇಳಿದ್ದರು. ಆ ಸಮಯದಲ್ಲಿ ನಡೆದ ಘಟನೆಯನ್ನು ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸಾವಿಗೆ ಒಂದು ತಿಂಗಳು ಮುನ್ನ ಕಥೆ ಒಪ್ಪಿದ್ದ ಅಪ್ಪು
ಹೌದು.. ಪುನೀತ್ ರಾಜ್ಕುಮಾರ್ ಅವರಿಗೆ ‘ಬೆಲ್ ಬಾಟಂ’ ಸಿನಿಮಾದ ನಿರ್ದೇಶಕ ಜಯತೀರ್ಥ ಕಥೆಯ ಎಳೆಯೊಂದನ್ನು ಹೇಳಿದ್ದರು. ಆ ಕಥೆಯನ್ನು ಅಪ್ಪು ಕೇಳಿ ಮೆಚ್ಚಿಕೊಂಡಿದ್ದರು. ಸಿನಿಮಾದ ಫಸ್ಟ್ ಹಾಫ್ ಚಿತ್ರಕಥೆ ಬರೆದು ಹೇಳಿ ಎಂದಿದ್ದರು. “ನನ್ನ ನಾಲ್ಕನೆಯ ಭೇಟಿಯಲ್ಲಿ ಅವರಿಗಾಗಿ ಒಂದು ಕಥೆಯನ್ನು ಮಾಡಿಕೊಂಡು ಹೋಗಿ ಕಥೆ ಹೇಳಿದ್ದೆ. ಸೆಪ್ಟೆಂಬರ್ 27ನೇ ತಾರೀಕು ಅವರಿಗೆ ಕಥೆ ಹೇಳಿದೆ. ಆಗ ಚೆನ್ನಾಗಿದೆ, ಇನ್ನೂ ಸ್ವಲ್ಪ ಡಿಟೈಲ್ ಆಗಿ ಬರೆದು ಫಸ್ಟ್ ಹಾಫ್ ಸ್ಕ್ರೀನ್ ಪ್ಲೇ ಹೇಳಿ ಎಂದಿದ್ದರು. ಅದಕ್ಕೆ ನಿರ್ಮಾಪಕರು ಉಮಾಪತಿ. ನಮ್ಮಿಬ್ಬರನ್ನೂ ಮೀಟಿಂಗ್ ಮಾಡಿಸಿದ್ದೇ ಉಮಾಪತಿ. ಎಲ್ಲಾ ಚೆನ್ನಾಗಿ ಆಗಿ ಪುನೀತ್ ರಾಜ್ಕುಮಾರ್ ಅವರು ನನಗೆ ಡೇಟ್ ಕೊಟ್ಟ ಹಾಗೇ ಆಗಿತ್ತು.” ಎಂದು ಪ್ರತಿಧ್ವನಿಗೆ ನೀಡಿದ ಸಂದರ್ಶನದಲ್ಲಿ ಜಯತೀರ್ಥ ವಿವರಿಸಿದ್ದಾರೆ.
‘ದ್ವಿತ್ವ’ ಶೂಟಿಂಗ್ ವೇಳೆ ಕಥೆ ರೀಡಿಂಗ್
“ನವೆಂಬರ್ 5ನೇ ತಾರೀಕಿನಿಂದ ದ್ವಿತ್ವ ಶೂಟಿಂಗ್ ಶುರುವಾಗುತ್ತೆ. ಆ ಶೂಟಿಂಗ್ ಸಂದರ್ಭದಲ್ಲಿ ನೀವು ಫಸ್ಟ್ ಹಾಫ್ ರೀಡಿಂಗ್ ಕೊಡಿ ಎಂದು ಹೇಳಿದ್ದರು. ನಾನು ಕೊಡ್ತೀನಿ ಅಂತ ಎಲ್ಲಾ ರೆಡಿ ಮಾಡಿಕೊಂಡಿದ್ದೆ. 29ನೇ ತಾರೀಕು ಅಕ್ಟೋಬರ್ಗೆ ಅವರು ಇಲ್ಲ. ಒಂದು ತಿಂಗಳಲ್ಲಿ ಅವರು ಇಲ್ಲ. ಅದು ತುಂಬಾನೇ ಕಾಡಿತು. ಈ ಮನುಷ್ಯನಿಗಾಗಿ ಏನೆಲ್ಲಾ ಮಾಡಿಕೊಂಡಿದ್ದೆ. ಈ ಕಥೆ ಅನಾಥವಾಗಿ ಹೋಯ್ತಲ್ಲ. ಈ ಆಲೋಚನೆಗಳು ಅನಾಥವಾಗಿ ಹೋಯ್ತಲ್ಲ ಅಂತ ಬಹಳ ಬೇಸರವಿದೆ ನನಗೆ. ನಾವು ಅವರನ್ನು ಕಳೆದುಕೊಂಡ್ವಿ.” ಎಂದು ನಿರ್ದೇಶಕ ಜಯತೀರ್ಥ ಬೇಸರ ವ್ಯಕ್ತಪಡಿಸಿದ್ದಾರೆ.
3 ಬಾರಿ ಅಪ್ಪು ಭೇಟಿ ಮಾಡಿದ್ದ ಜಯತೀರ್ಥ
“ನನಗೂ ಪುನೀತ್ ರಾಜ್ಕುಮಾರ್ ಅವರಿಗೂ ಹೆಚ್ಚು ಬಾರಿ ಭೇಟಿಯಾಗಿಲ್ಲ. ನಾನು ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದು ನಾಲ್ಕೇ ಬಾರಿ. ಆದರೆ, ನಾಲ್ಕನೇ ಬಾರಿ ಭೇಟಿ ಇದೆಯಲ್ಲಾ, ಅದಕ್ಕೆ ದೊಡ್ಡ ಆಳ ಇದೆ. ಮೊದಲನೇ ಭೇಟಿ ನನಗೆ ಒಲವೇ ಮಂದಾರ ಸಿನಿಮಾದಲ್ಲಿ ಬೆಸ್ಟ್ ಡೈರೆಕ್ಟರ್ ಫಿಲ್ಮ್ ಫೇರ್ ಅವಾರ್ಡ್ ಬಂದಿತ್ತು. ಅವರಿಗೆ ಬೆಸ್ಟ್ ಆಕ್ಟರ್ ಫಿಲ್ಮ್ ಫೇರ್ ಪ್ರಶಸ್ತಿ ಬಂದಿತ್ತು. ನಾವಿಬ್ಬರೂ ಒಟ್ಟಿಗೆ ವೇದಿಕೆ ಮೇಲಿದ್ದೆವು. ಅದು ಮೊದಲನೇ ಭೇಟಿ. ಎರಡನೇ ಭೇಟಿ ನನ್ನೊಂದು ಸಿನಿಮಾಗೆ ಅವರು ಹಾಡುವುದಕ್ಕೆ ಬಂದಿದ್ದರು. ಮೂರನೇ ಭೇಟಿ ನಮ್ಮ ‘ಬೆಲ್ ಬಾಟಂ 2’ ಸಿನಿಮಾ ಚಾಲನೆ ವೇಳೆ ಬಂದಿದ್ದರು.” ಎಂದು ಉಳಿದ ಮೂರು ಭೇಟಿ ಬಗ್ಗೆ ಜಯತೀರ್ಥ ವಿವರಿಸಿದ್ದಾರೆ.
‘ಬನಾರಸ್’ ಫಸ್ಟ್ ಲುಕ್ ರಿಲೀಸ್ ಮಾಡಬೇಕಿತ್ತು
“ನಮ್ಮ ಬನಾರಸ್ ಸಿನಿಮಾ ಫಸ್ಟ್ ಲುಕ್ ಅನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು. ನಮ್ಮ ಸಿನಿಮಾದ ಹೀರೊ ಜೊತೆ ಮಾತಾಡಿದ್ದರು. ಆ ವಾಯ್ಸ್ ಕೂಡ ಹರಿದಾಡಿತ್ತು. ಗುರುವಾರ ನಮ್ಮ ಹೀರೋಗೆ ಶನಿವಾರ ಬಂದ್ಬಿಡು ನಾನು ಸಿಗುತ್ತೇನೆ ಎಂದಿದ್ದರು. ಶುಕ್ರವಾರ ಅವರ ಇಲ್ಲ. ಕೊನೆಗೆ ನಾವೆಲ್ಲರೂ ಡಿಸೈಡ್ ಮಾಡಿ, ಅವರು ತೀರಿಕೊಂಡು 18 ದಿನಗಳ ಬಳಿಕ ಅವರ ಸಮಾಧಿ ಬಳಿ ಹೋಗಿ, ಅವರ ಸಮ್ಮುಖದಲ್ಲಿಯೇ ಲಾಂಚ್ ಮಾಡಿದ್ದೆವು.” ಎಂದು ಅಪ್ಪು ಜೊತೆಗಿನ ಒಡನಾಟದ ಬಗ್ಗೆ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada