ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರ್ಯನ್ ಖಾನ್ ಅನ್ನು ಬಂಧಿಸಿದ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಾಂಖೆಡೆ ಕಾರ್ಯನಿರ್ವಹಣೆ ಬಗ್ಗೆ ಕೆಲವರು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ವಾಂಖೆಡೆ ರಾಜಕೀಯ ಒತ್ತಡಕ್ಕೆ ಸಿಲುಕಿ ಆರ್ಯನ್ ಅನ್ನು ಬಂಧಿಸಿದ್ದಾರೆ ಎಂದು ಕೆಲವರು, ವಾಂಖೆಡೆ ಕೇವಲ ಬಾಲಿವುಡ್ ಮಂದಿಯನ್ನು ಮಾತ್ರವೇ ಬಂಧಿಸುತ್ತಾರೆ ಎಂದು ಇನ್ನು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಈ ನಡುವೆ ವಾಂಖೆಡೆಗೆ ಹೊಸ ಭೀತಿಯೊಂದು ಎದುರಾಗಿದೆ.
ಆರ್ಯನ್ ಖಾನ್ ಪ್ರಕರಣ ಆದ ಬಳಿಕ ವಾಂಖೆಡೆ ಅವರ ಜೀವಕ್ಕೆ ಬೆದರಿಕೆ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ವಾಂಖೆಡೆ ಅವರನ್ನು ಯಾರೊ ಕೆಲವರು ದಿನವೂ ಹಿಂಬಾಲಿಸುತ್ತಿದ್ದಾರಂತೆ. ವಾಂಖೆಡೆ ಹೋದಲ್ಲೆಲ್ಲ ಇಬ್ಬರು ವ್ಯಕ್ತಿಗಳು ಅವರನ್ನು ಹಿಂಬಾಲಿಸಿದ್ದಾರೆ. ಇದು ವಾಂಖೆಡೆ ಗಮನಕ್ಕೂ ಬಂದಿದೆ.
ತಮ್ಮನ್ನು ಕೆಲವರು ಹಿಂಬಾಲಿಸುತ್ತಿರುವುದು ಗಮನಕ್ಕೆ ಬಂದ ಕೂಡಲೇ ವಾಂಖೆಡೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವಾಂಖೆಡೆ ಆಗಾಗ್ಗೆ ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಹೋಗುತ್ತಿರುತ್ತಾರೆ, ಇಬ್ಬರು ಅಗಂತುಕರು ಅಲ್ಲಿಗೂ ಹೋಗಿ ವಾಂಖೆಡೆಯನ್ನು ಹಿಂಬಾಲಿಸಿದ್ದು, ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದು ಕೊಂಡು ಹೋಗಿದ್ದಾರೆ. ‘ನಾವು ಪೊಲೀಸರು ತನಿಖೆ ಬೇಕಿದೆ’ ಎಂದು ಹೇಳಿ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆ ನಡೆದ ಬಳಿಕ ಅನುಮಾನಗೊಂಡ ವಾಂಖೆಡೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇದೀಗ ಆ ಇಬ್ಬರು ಅಗಂತುಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆರ್ಯನ್ ಬಂಧನ ಆದ ಬಳಿಕ ವಾಂಖೆಡೆ ಕಾರ್ಯದ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲವರು ಸಮೀರ್ ವಾಂಖೆಡೆಯನ್ನು ಹೊಗಳಿದರೆ ಇನ್ನು ಕೆಲವರು ಅವರ ಕಾರ್ಯದಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.