ಪಂಜಾಬ್ ರಾಜ್ಯ ಈಗ ಸುದ್ದಿಯ ಕೇಂದ್ರ. ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ರೈತರ ಪ್ರತಿಭಟನೆ, ಸಿಎಂ ಬದಲಾವಣೆ, ಇತ್ತೀಚೆಗೆ ಪ್ರಧಾನಿ ಮೋದಿ ಸಂಚಾರಕ್ಕೆ ಅಡ್ಡಿ, ಭದ್ರತಾ ಲೋಪ ಆರೋಪ, ವಿಧಾನಸಭೆ ಚುನಾವಣೆ ಇನ್ನೂ ಕೆಲವು ಕಾರಣಗಳಿಂದ ರಾಷ್ಟ್ರದ ಕಣ್ಣು ಪಂಜಾಬ್ ಮೇಲಿದೆ.
ಪಂಜಾಬ್ ರಾಜ್ಯ ಚುನಾವಣೆ ಆಯೋಗದ ಕಡೆಯಿಂದ ‘ರಾಜ್ಯದ ಐಕಾನ್’ ಆಗಿದ್ದ ನೇಮಕವಾಗಿದ್ದ ಸೋನು ಸೂದ್ ಇದೀಗ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ತಾವು ಪಂಜಾಬ್ನ ‘ರಾಜ್ಯ ಐಕಾನ್’ ಸ್ಥಾನದಿಂದ ಕೆಳಗೆ ಇಳಿಯುತ್ತಿರುವುದಾಗಿ ಸ್ವತಃ ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ರ ಸಹೋದರಿ ಈ ಬಾರಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಹಾಗಾಗಿ ತಾವು ಚುನಾವಣಾ ಆಯೋಗದ ರಾಯಭಾರಿಯಾಗಿ ಮುಂದುವರೆಯುವುದು ಸೂಕ್ತವಲ್ಲ ಎಂದು ನಿಶ್ಚಯಿಸಿ ಈ ನಿರ್ಣಯ ತೆಗೆದುಕೊಂಡಿರುವುದಾಗಿ ಸೋನು ಸೂದ್ ಹೇಳಿದ್ದಾರೆ. ಈ ನಿರ್ಣಯವನ್ನು ತಾವು ಹಾಗೂ ಚುನಾವಣೆ ಆಯೋಗ ಜಂಟಿಯಾಗಿ ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಸೋನು.
”ಎಲ್ಲ ಒಳ್ಳೆಯ ಸಂಗತಿಗಳಿಗೂ ಕೊನೆ ಎಂಬುದು ಇದ್ದೇ ಇರುತ್ತದೆ. ನನ್ನ ಈ ಪಯಣವೂ ಅಂತ್ಯ ತಲುಪಿದೆ. ನಾನು ಸ್ವಯಂಪ್ರೇರಿತವಾಗಿ ಪಂಜಾಬ್ ರಾಜ್ಯ ಯೂತ್ ಐಕಾನ್ ಸ್ಥಾನದಿಂದ ಬಿಡುಗಡೆ ಹೊಂದುತ್ತಿದ್ದೇನೆ. ನನ್ನ ಕುಟುಂಬ ಸದಸ್ಯರೊಬ್ಬರು ಪಂಜಾಬ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾರಣ ಈ ನಿರ್ಣಯವನ್ನು ನಾನು ಮತ್ತು ಚುನಾವಣೆ ಆಯೋಗ ಜಂಟಿಯಾಗಿ ತೆಗೆದುಕೊಂಡಿದ್ದೇವೆ. ಚುನಾವಣೆ ಆಯೋಗದ ಮುಂದಿನ ಕಾರ್ಯಗಳಿಗೆ ಶುಭವಾಗಲಿ” ಎಂದು ಸೋನು ಸೂದ್ ಹಾರೈಸಿದ್ದಾರೆ.
ಆದರೆ ಸೋನು ಸೂದ್ ಟ್ವೀಟ್ ಮಾಡುವುದಕ್ಕೂ ಮುಂಚೆಯೇ ಟ್ವೀಟ್ ಮಾಡಿದ್ದ ಚುನಾವಣಾ ಆಯೋಗ, ಸೋನು ಸೂದ್ ಅನ್ನು ಪಂಜಾಬ್ ರಾಜ್ಯ ಐಕಾನ್ ಗರಿಮೆಯಿಂದ ಕೆಳಗಿಳಿಸಲಾಗಿದೆ ಎಂದಿತ್ತು. ಹಾಗಾಗಿ ಸೋನು ಸೂದ್ ಅನ್ನು ಚುನಾವಣೆ ಆಯೋಗವೇ ಐಕಾನ್ ಸ್ಥಾನದಿಂದ ಕೆಳಗಿಳಿಸಿದೆ ಎನ್ನಲಾಗುತ್ತಿತ್ತು. ಆದರೆ ತಾನು ಮತ್ತು ಚುನಾವಣೆ ಆಯೋಗ ಜಂಟಿಯಾಗಿ ಈ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಸೋನು ಸೂದ್ ಹೇಳಿದ್ದಾರೆ.
ಸೋನು ಸೂದ್ ಪಂಜಾಬ್ನ ಮೋಗಾ ಜಿಲ್ಲೆಯವರಾಗಿದ್ದು, ಅದೇ ಜಿಲ್ಲೆಯ ವಿಧಾನಸಭೆ ಕ್ಷೇತ್ರದಿಂದ ಸೋನು ಸೂದ್ರ ಸಹೋದರಿ ಮಾಳವಿಕ ಸೂದ್ ಚುನಾವಣೆ ಸ್ಪರ್ಧಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಸೋನು ಸೂದ್ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಸೋನು ಸೂದ್ ಸಹೋದರಿ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿಯನ್ನು ಸೋನು ಸೂದ್ ನೀಡಿಲ್ಲ. ಆದರೆ ಎಎಪಿಯಿಂದ ಅವರು ಚುನಾವಣೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಸೋನು ಸೂದ್ ದೆಹಲಿ ರಾಜ್ಯದ ಶಿಕ್ಷಣ ಇಲಾಖೆಯ ರಾಯಭಾರಿ ಆಗಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜೊತೆಗೆ ಆಪ್ತ ಸಂಬಂಧ ಹೊಂದಿದ್ದಾರೆ. ಸೋನು ಸೂದ್ಗೆ ಬಿಜೆಪಿ ಟಿಕೆಟ್ ಆಫರ್ ನೀಡಿತ್ತು ಆದರೆ ಅದನ್ನು ಸೋನು ಸೂದ್ ನಿರಾಕರಿಸಿದರು ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿಯೇ ಸೋನು ಸೂದ್ ವಿರುದ್ಧ ಐಟಿ ದಾಳಿಗಳಾದವು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada