ಸುಷ್ಮಾ ಸ್ವರಾಜ್
ನಿತ್ಯ ನಗೆಮೊಗದ, ನಿರಂತರ ಕ್ರಿಯಾಶೀಲೆ, ಉತ್ತಮ ವಾಗ್ಮಿ, ಅಪರೂಪದ ರಾಜಕಾರಣಿ ದಿವಂಗತರಾದ ಸುಷ್ಮಾ ಸ್ವರಾಜ್ ಅವರ ಜನ್ಮದಿನವಿದು.
2014-19 ಅವಧಿಯಲ್ಲಿ ಕೇಂದ್ರದ ವಿದೇಶಾಂಗ ಸಚಿವೆಯಾಗಿದ್ದು ರಾಜಕೀಯ ಜೀವನದಲ್ಲಿ ಹಲವು ಜವಾಬ್ಧಾರಿಗಳನ್ನು ಸುಲಲಿತವಾಗಿ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್, ತಮ್ಮ ದಿಟ್ಟ ನಡೆ, ನೇರ ನುಡಿಗಳ ಮೂಲಕ ಎಲ್ಲರ ಮನಗೆದ್ದವರು.
ಹರಿಯಾಣ ಮೂಲದ ಸುಷ್ಮಾ ಸ್ವರಾಜ್ ಅವರು 1953 ಫೆಬ್ರವರಿ 14ರಂದು ಅಂಬಾಲಾ ಕಂಟೋನ್ಮೆಂಟ್ನಲ್ಲಿ ಜನಿಸಿದರು. ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ ಅವರು. ಸುಷ್ಮಾ ಅವರು ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಆ ನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು 1973ರಲ್ಲಿ ಸುಪ್ರೀಂಕೋರ್ಟ್ ವಕೀಲರಾಗಿ ಅಭ್ಯಾಸ ಆರಂಭಿಸಿದ ಇವರು ಮುಂದೆ ಎಬಿವಿಪಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು.
1975ರಲ್ಲಿ ಜಾರ್ಜ್ ಫರ್ನಾಂಡೀಸ್ ಕಾನೂನು ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ ಸುಷ್ಮಾ ಅವರು, ಜಯಪ್ರಕಾಶ್ ನಾರಾಯಣರು ಕರೆಕೊಟ್ಟ ಕ್ರಾಂತೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ತುರ್ತುಪರಿಸ್ಥಿತಿ ನಂತರದಲ್ಲಿ 1977ರಲ್ಲಿ ಸುಷ್ಮಾ ಅವರು ಹರಿಯಾಣದಲ್ಲಿ ಶಾಸಕಿಯಾಗಿ ಆಯ್ಕೆಯಾದರು.
ಜನತಾ ಪಕ್ಷದ ಯುಗದ ನಂತರದಲ್ಲಿ ಭಾರತೀಯ ಜನತಾ ಪಕ್ಷದ ಆವರಣಕ್ಕೆ ಬಂದ ಸುಷ್ಮಾ ಅವರು, ಪಕ್ಷದಲ್ಲಿನ ಅನೇಕ ಜವಾಬ್ಧಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದವರು. 1990ರಲ್ಲಿ ರಾಜ್ಯಸಭೆಗೆ ಆಯ್ಕೆಗೊಂಡ ಸುಷ್ಮಾ 1996ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ದೆಹಲಿ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರದಲ್ಲಿ ಹಲವು ಖಾತೆಗಳಲ್ಲಿ ಪ್ರಭಾವಿಯಂತೆ ಕೆಲಸ ನಿರ್ವಹಿಸಿದವರು ಸುಷ್ಮಾ ಸ್ವರಾಜ್.
ಕರ್ನಾಟಕದೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಸುಷ್ಮಾ ಅವರು ಬಳ್ಳಾರಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡರೂ ಇಲ್ಲಿನ ಜನರ ಅಪಾರ ಪ್ರೀತಿ ವಿಶ್ವಾಸ ಗಳಿಸಿದ್ದರು.
ಎಷ್ಟೇ ಯಶಸ್ಸಿದ್ದರೂ ಕಾಲನ ಕರೆ ಬರುತ್ತಿದೆ ಎಂದು ಅರಿತಿದ್ದ ಸುಷ್ಮಾ ಸ್ವರಾಜ್ ಅವರು 2019 ಸಾಲಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ. ಅವರು 2019 ವರ್ಷದ ಆಗಸ್ಟ್ 9 ರಂದು ತಮ್ಮ ಕ್ರಿಯಾಶೀಲ ಬದುಕಿಗೆ ವಿದಾಯ ಹೇಳಿದರು. ಆ ಆತ್ಮವಿಶ್ವಾಸದ ನಗೆಮೊಗ ಆಗಾಗ ಸಂಭವಿಸುವಂತದ್ದಲ್ಲ ಮತ್ತು ಮರೆಯುವಂತದ್ದಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: