ಸ್ಟೀಫನ್ ಹಾಕಿಂಗ್ ಯುವ ವಿಜ್ಞಾನಿ

1962ನೇ ಇಸ್ವಿಯಲ್ಲಿ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್. ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟೊರೇಟ್ ಸಂಶೋಧನೆ ಮಾಡುತ್ತಿದ್ದರು. ಸಂಶೋಧನೆ ಅಷ್ಟೇನೂ ಚೆನ್ನಾಗಿ ಮುಂದುವರೆದಿರಲಿಲ್ಲ.
ಹಾಕಿಂಗ್‌ಗೂ ಅದರಲ್ಲಿ ಅಷ್ಟು ತೀಕ್ಷ್ಣವಾದ ಆಸಕ್ತಿ ಕಂಡಿರಲಿಲ್ಲ. ವೈದ್ಯರ ವರದಿ ಅವರ ಬದುಕಿನಲ್ಲಿ ಬಂದ ಬಹುದೊಡ್ಡ ತಿರುವು. ಆಗ ಅವರ ಮುಂದೆ ಇದ್ದದ್ದು ಎರಡೇ ಹಾದಿಗಳು. ಒಂದು, ದುಃಖದಿಂದ ಕೆಲಸವೆಲ್ಲವನ್ನು ನಿಲ್ಲಿಸಿ ಕೊರಗುತ್ತ ಸಾವಿಗಾಗಿ ಕಾಯವುದು. ಇನ್ನೊಂದು ಉಳಿದ ಸ್ವಲ್ಪವೇ ಸಮಯವನ್ನು ಸರಿಯಾಗಿ ಬಳಸಿ ಸಾಧನೆ ಮಾಡುವುದು. ಹಾಕಿಂಗ್ ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಇವರಿಗೆ ಸ್ಫೂರ್ತಿಯಾಗಿ ನಿಂತವರು, ಇವರ ಜೊತೆಗಾತಿ ಜೇನ್. ಆಕೆಯ ಚೇತೋಹಾರಿಯಾದ ಮಾತುಗಳು, ಪ್ರೋತ್ಸಾಹ ಹಾಕಿಂಗ್‌ ಅವರನ್ನು ಬಡಿದೆಬ್ಬಿಸಿದವು. ನಿಜ, ಅವರಿಗೆ ಸಾವಿನ ಭಯವಿತ್ತು.ಆದರೆ, ಅದಕ್ಕಿಂತ ಹೆಚ್ಚಾಗಿ ಸಾವು ಬರುವುದಕ್ಕಿಂತ ಮೊದಲು ಯಾವ ಸಾಧನೆಯನ್ನೂ ಮಾಡದಿರುವುದರ ಭಯವಿತ್ತು. ಮುಂಬರುವ ತಿಂಗಳುಗಳಲ್ಲಿ ಅವರ ಆರೋಗ್ಯ ಎಷ್ಟೆಷ್ಟು ಕುಸಿಯುತ್ತಿತ್ತೋ ಅವರ ಸಾಧನೆಯ ಮಟ್ಟ ಅಷ್ಟಷ್ಟು ಏರುತ್ತಿತ್ತು. 1974ರಲ್ಲಿ ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ವಯಸ್ಸಿನ ಫೆಲೋ ಆಗಿ ಆಯ್ಕೆಯಾದರು. 1982ರಲ್ಲಿ ಬ್ರಿಟಿಷ್ ಸರಕಾರ, ತನ್ನ ಅತ್ಯುಚ್ಛ ಗೌರವವಾದ ‘ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪಾಯರ್‌’ ಇವರಿಗೆ ನೀಡಿ ಗೌರವಿಸಿತು. ಅವರ ತಲಸ್ಪರ್ಶಿಯಾದ ಅಧ್ಯಯನದಿಂದ ಸೈದ್ಧಾಂತಿಕ ಖಗೋಲಶಾಸ್ತ್ರದಲ್ಲಿ ಅದರಲ್ಲೂ ಕಪ್ಪು ರಂಧ್ರಗಳ ಬಗ್ಗೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು. ಆಗ ಅವರು ಬರೆದ ಗ್ರಂಥ, ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ವಿಜ್ಞಾನದ ಗ್ರಂಥಗಳಲ್ಲಿ ಒಂದು ವಿಶೇಷ ಮೈಲಿಗಲ್ಲು. ಅದು ಪ್ರಪಂಚದ ಅತ್ಯಂತ ಜನಪ್ರಿಯ ವಿಜ್ಞಾನದ ಪುಸ್ತಕವಾಗಿ ದಾಖಲಾಗಿದೆ.
ಈ ಸಾಧನೆಯ ಭರಾಟೆಯಲ್ಲಿ ಇವರೇ ಸಾವನ್ನು ಮರೆತರೋ ಅಥವಾ ಯಮ ಬೆರಗಾಗಿ ಮರೆತು ಹೋದನೋ ತಿಳಿಯದು. ಒಂದೆರಡು ವರ್ಷಗಳೂ ಬದುಕುವುದು ಸಾಧ್ಯವಿಲ್ಲವೆಂದು ಐವತ್ತಾರು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾಲೆಂಬಂತೆ, ಕಳೆದ 2018ರ ಮಾರ್ಚ್ 14ರಂದು ನಿಧಾನರಾಗುವವರೆಗೆ, ತಮ್ಮ ಕೊನೆಯ ದಿನಗಳವರೆವಿಗೂ ಸಂಶೋಧನೆಯನ್ನು ನಡೆಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕೋಡಿಯಲ್ಲಿ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ.

Sun Jan 8 , 2023
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ. ಸಂಪುಟದಲ್ಲಿ ಶಾಸಕ ದುರ್ಯೋಧನ ಐಹೊಳೆ ಹೆಸರು ಉಲ್ಲೇಖ ವಿಚಾರ. ಸಚಿವ ಸ್ಥಾನ ಬೇಡವೆಂದ ಶಾಸಕ ದುರ್ಯೋಧನ ಐಹೊಳೆ. ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇವೆ. ಹೀಗಾಗಿ ನನಗೆ ಸಚಿವ ಸ್ಥಾನ ಬೇಡ. ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದೇ ಪ್ರಮುಖವಾಗಿದೆ. ಮುಂದಿನ ಬಾರಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದ್ರೆ ನೋಡೋಣ ಎಂದ ಶಾಸಕ. ಚಿಕ್ಕೋಡಿಯಲ್ಲಿ ಶಾಸಕ […]

Advertisement

Wordpress Social Share Plugin powered by Ultimatelysocial