ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು, 2022ರಲ್ಲಿ ಹುಂಡಿಯಲ್ಲಿ 1,450 ಕೋಟಿ ರೂ. ಸಂಗ್ರಹವಾಗಿದೆ. 2021ರಲ್ಲಿ 833 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡಿ ಆದಾಯವು ಶೇ. 75ರಷ್ಟು ವೃದ್ಧಿಯಾಗಿದೆ.2021ರ ಬಹುಭಾಗ ಮತ್ತು 2022ರ ಆರಂಭದಲ್ಲಿ ಕೋವಿಡ್ ನಿರ್ಬಂಧಗಳಿಂದ ಭಕ್ತರ ಸಂಖ್ಯೆ ತುಸು ಕಡಿಮೆಯಾಗಿತ್ತು. ವರ್ಷದ ಕೊನೆ ಹೊತ್ತಿಗೆ ಭಕ್ತರ ಸಂಖ್ಯೆ ಮತ್ತು ಆದಾಯವು ಗಣನೀಯವಾಗಿ ವೃದ್ಧಿಯಾಗಿದೆ. ಹೀಗಾಗಿ ಈ ಎರಡು ವರ್ಷಗಳ ನಡುವಿನ ಅಂಕಿ ಅಂಶಗಳ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ದೇವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.2022ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 2.37 ಕೋಟಿ. ಇದರ ಹಿಂದಿನ ವರ್ಷ 2021ರಲ್ಲಿ 1.04 ಕೋಟಿ ಭಕ್ತರು ಭೇಟಿ ನೀಡಿದ್ದರು.2022ರಲ್ಲಿ ಟಿಟಿಡಿ ಮಾರಾಟ ಮಾಡಿರುವ ಲಡ್ಡುಗಳ ಸಂಖ್ಯೆ 11.54 ಲಕ್ಷ. ಕಳೆದ ವರ್ಷ 5.96 ಲಕ್ಷ ಲಡ್ಡುಗಳು ಮಾರಾಟವಾಗಿದ್ದವು.ಕಳೆದ ವರ್ಷದ ಡಿಸೆಂಬರ್ವೊಂದರಲ್ಲಿಯೇ 129 ಕೋಟಿ ರೂ ಹುಂಡಿ ಆದಾಯ ಸಂಗ್ರಹವಾಗಿದೆ. ಜ. 11ರ ವರೆಗೆ 6 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದು, ಶ್ರೀವಾರಿ ಹುಂಡಿಗೆ ಹಾಕಿರುವ ಹಣ 39.40 ಕೋಟಿ ರೂ ಎಂದು ವರದಿಯಾಗಿದೆ.ಕಳೆದ ವರ್ಷ ಹುಂಡಿಯಲ್ಲಿ 1,450.50 ಕೋಟಿ ರೂ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ತಿಳಿಸಿದ್ದಾರೆ.
https://play.google.com/store/apps/details?id=com.speed.newskannada