ಬ್ರಹ್ಮಚಾರಿ ರೈತರ ಮಕ್ಕಳ ಗೋಳು ಕೇಳುವವರು ಯಾರು? ಮದುವೆ ವಯಸ್ಸು ಮೀರಿದರೂ ಹೆಣ್ಣು ಮಾತ್ರ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮಂಡ್ಯದ ಬ್ರಹ್ಮಚಾರಿ ಯುವಕರ ತಂಡ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ನೊಂದ ಯುವಕರಿಗೆ ಹೆಣ್ಣು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಲು ಮುಂದಾಗಿದ್ದಾರೆ.ಈ ಪಾದಯಾತ್ರೆಗೆ ನಟ ಧನಂಜಯ ಚಾಲನೆ ನೀಡಿರುವುದು ವಿಶೇಷ.ದೇಶದಲ್ಲಿ ಪುರುಷ ಹಾಗೂ ಮಹಿಳೆಯರ ನಡುವಿನ ಲಿಂಗಾನುಪಾತವು ಸರಿಯಾಗಿಲ್ಲದಿರುವುದು ಹಲವು ಭಾಗಗಳಲ್ಲಿ ಯುವಕರಿಗೆ ಹುಡುಗಿ ಸಿಗದಿರುವುದಕ್ಕೆ ಕಾರಣವಾಗಿದೆ. ಅದರಲ್ಲೂ ರೈತರ ಕುಟುಂಬದ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಮಂಡ್ಯದ ಕೆ. ಎಂ ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗಿದೆ. ಸಾಕಷ್ಟು ಜನ ಅವಿವಾಹಿತ ಯುವಕರು ಈ ಪಾದಯಾತ್ರೆಯಲ್ಲಿ ಭಾಗಿ ಆಗುತ್ತಿದ್ದಾರೆ. ಆಂಧ್ರ, ಕೇರಳದಿಂದಲೂ ಕೆಲ ಯುವಕರು ಬಂದು ಇದರಲ್ಲಿ ಭಾಗಿ ಆಗಿದ್ದಾರೆ.ಪಾದಯಾತ್ರೆಯಲ್ಲಿ ಭಾಗಿ ಆಗುವ ಯುವಕರಿಗೆ 30 ವರ್ಷ ತುಂಬಿರಬೇಕು, ಮದುವೆ ಆಗಿರಬಾರದು, ನಿಶ್ಚಿತಾರ್ಥ ಕೂಡ ಆಗಿರಬಾರದು ಎನ್ನುವ ಷರತ್ತು ಇದೆ. ಮದುವೆಯಾಗದ ಯುವಕರಿಗೆ ಆತ್ಮಸ್ಥೈರ್ಯ ತುಂಬಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆಯಂತೆ. ಇನ್ನು ಪಾದಯಾತ್ರೆಯಲ್ಲಿ ಭಾಗವಹಿಸುವ ಯುವಕರಿಗೆ ದಾರಿಯುದ್ದಕ್ಕೂ ಊಟ, ಪಾನೀಯ, ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೆ. ಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಪಾದಯಾತ್ರೆ ಮಹದೇಶ್ವರ ಬೆಟ್ಟ ತಲುಪಲಿದೆ.”ಬ್ರಹ್ಮಚಾರಿಗಳ ನಡೆ.. ಮಹದೇಶ್ವರ ಬೆಟ್ಟದ ಕಡೆ” ಪಾದಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿರುವ ನಟ ಧನಂಜಯ “ಮದುವೆ ಆಗಿಲ್ಲ ಅಂತ ಈ ರೀತಿ ಪಾದಯಾತ್ರೆ ನಡೆಸೋದನ್ನು ನಾನು ಇದೇ ಫಸ್ಟ್ ಟೈಮ್ ಕೇಳಿದ್ದು. ಮೊದಲಿಗೆ ಫ್ರೆಂಡ್ಸ್ ವಾಟ್ಸಪ್ ಗ್ರೂಪ್ಗಳಲ್ಲಿ ಇದನ್ನು ನೋಡಿದಾಗ ತಮಾಷೆ ಅನ್ನಿಸಿತ್ತು. ನೋಡ್ರಪ್ಪ ಹಿಂದೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗ್ತಿದ್ದಾರಂತೆ ಕೆ. ಎಂ ದೊಡ್ಡಿಯಿಂದ. ಇವರೆಲ್ಲ ಬ್ರಹ್ಮಚಾರಿಗಳಂತೆ. ನಿಶ್ಚಿತಾರ್ಥ ಆದವರಿಗೂ ಜಾಗ ಇಲ್ಲವಂತೆ. ತಮಾಷೆಯಾಗಿ ಶುರುವಾಯಿತು.”ಇಲ್ಲಿ ಬಂದಾಗಲೂ ಅದನ್ನೇ ಕೇಳ್ದೆ. ಪಾದಯಾತ್ರೆ ಯಾಕೆ ಅಂತ. ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂದ್ರು. ತಮಾಷೆ ಅನಿಸುತ್ತೆ. ಅವ್ರು ಕೂಡ ನಗುತ್ತಲೇ ಹೇಳಿದರು. ಆದರೆ ಇದು ನಿಜಕ್ಕೂ ಗಂಭೀರವಾದ ವಿಚಾರ ಅಲ್ವಾ. ಹಂಗಾಗಿ ವಿಷಯ ಗೊತ್ತಾದಾಗ. ಹೋಗೋಣ ಮಾತಾಡ್ಸೋಣ ಅಂತ ಬಂದೆ. ಖಂಡಿತ ಇದು ದೊಡ್ಡ ಜಾಗೃತಿ ಕಾರ್ಯಕ್ರಮ. ನಾನು ಕೂಡ ಹಳ್ಳಿಯಿಂದ್ಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನ ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳ್ತಾರೆ. ಇತ್ತೀಚೆಗೆ ಆದಿಚುಂಚನಗಿರಿಯಲ್ಲಿ ವಧು-ವರರ ನೋಂದಣಿಯಲ್ಲಿ ಪಾಲ್ಗೊಂಡಿದ್ದ ಯುವಕರ ಸಂಖ್ಯೆ ನೋಡಿದ್ರೆ ಲಿಂಗಾನುಪಾತ ಗೊತ್ತಾಗುತ್ತೆ”ನಾನು ಚಿಕ್ಕಹುಡುಗ್ರು ಇದ್ದಾಗಲಿಂದಲೂ ಗಂಡು ಮಕ್ಕಳೇ ಬೇಕು ಅಂತಿದ್ರು. ಹೆಣ್ಣು ಮಕ್ಕಳು ಹುಟ್ಟಿದ್ರೆ ತಾತ್ಸಾರ ಇತ್ತು. 25 ವರ್ಷ ಆದಮೇಲೆ ಅದರ ರಿಸಲ್ಟ್ ಗೊತ್ತಾಗುತ್ತಿದೆ. ಹೆಣ್ಣು-ಗಂಡಿನ ನಡುವೆ ಲಿಂಗಾನುಪಾತ ಏರುಪೇರಾಗಿದೆ ಅನ್ನೋದು ತಿಳಿಯುತ್ತೆ. ಹಳ್ಳಿಯವರು ಕೂಡ ಸಿಟಿಗಳಿಗೆ ಹೆಣ್ಣು ಕೊಡಬೇಕು ಅಂತ ಯೋಚನೆ ಮಾಡುತ್ತಿದ್ದಾರೆ. ಅವರ ಆಲೋಚನೆಯನ್ನು ನಾವು ತಪ್ಪು ಅನ್ನೋಕೆ ಆಗೊಲ್ಲ. ತಂದೆ, ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಅವರದ್ದೇ ಆದ ಕನಸುಗಳು ಇರುತ್ತೆ.ಎಲ್ಲವನ್ನು ಮೀರಿ ಖಂಡಿತ ಇಲ್ಲೊಂದು ಸಮಸ್ಯೆ ಇದೆ. ರೈತರ ಮನೆ ಯುವಕರಿಗೆ ಹೆಣ್ಣು ಸಿಗಲ್ಲ ಅಂತ ಪಾದಯಾತ್ರೆ ಹೊರಟ್ಟಿದ್ದಾರೆ. ಇದು ಬರೀ ಪಾದಯಾತ್ರೆ ಅಲ್ಲ, ಜಾಗೃತಿ ಕಾರ್ಯಕ್ರಮ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಜೋಡಿಯಾಗಿ ಬೆಟ್ಟಕ್ಕೆ ಹೋಗಲಿ ಎಂದು ಶುಭ ಹಾರೈಸಿದ್ದಾರೆ.ಇವತ್ತಿಗೂ ಗಂಡು ಮಕ್ಕಳೇ ಬೇಕು ಎನ್ನುವ ಮನಸ್ಥಿತಿ ಇದೆ. ಅವರೆಲ್ಲಾ ಹೆಣ್ಣು ಮಕ್ಕಳಿಗೆ ಡಿಮ್ಯಾಂಡಿದೆ ಎಂದು ಖುಷಿಪಡಿ. ರೈತರಿಗೆ ಬಹಳ ಸಮಸ್ಯೆಗಳಿವೆ. ಬಹಳ ಕಷ್ಟಪಡುತ್ತಾರೆ. ಮಳೆ ಬೆಳೆ ಯಾವುದು ಅಂದುಕೊಂಡಂತೆ ಆಗುವುದಿಲ್ಲ. ಹಾಗಾಗಿ ಹೆಣ್ಣು ಕೊಡೋದಕ್ಕೆ ಯೋಚನೆ ಮಾಡ್ತಾರೆ. ರೈತರಾಗಿಯೂ ತುಂಬಾ ಚೆನ್ನಾಗಿದೆ ಬದುಕುತ್ತಿರುವವರ ಉದಾಹರಣೆಗಳು ತುಂಬಾ ಇದ್ದಾವೆ. ಹಳ್ಳಿಗಳಲ್ಲೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಹಾಗಂತ ಯಾರನ್ನೂ ಬಲವಂತ ಮಾಡೋದಕ್ಕೆ ಆಗಲ್ಲ.ನಾನು ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಬಹುದು ಅಂದಾಕ್ಷಣ ಇವನ್ಯಾಕೆ ಸಿನಿಮಾ ಮಾಡ್ತಿದ್ದಾನೆ, ವಾಪಸ್ ಹೋಗು ಅಂದ್ರೆ ಕಷ್ಟ. ನಾನು ಎಲ್ಲೋದ್ರೂ ಮದುವೆ ಯಾವಾಗ ಅಂತ ಕೇಳ್ತಿದ್ದಾರೆ. ನನ್ನ ಮದುವೆಗೂ ನಾನು ಇಲ್ಲಿ ಬಂದಿರುವುದಕ್ಕೂ ಸಂಬಂಧ ಇಲ್ಲ. ಇಲ್ಲಿಗೆ ಬಂದ ಮೇಲೆ ಮದುವೆ ಆದ್ರೆ ಆಗಲಿ. ಮದುವೆಗಾಗಿ ಯಾವುದೇ ಹರಕೆ ಕಟ್ಟಿಕೊಂಡಿಲ್ಲ. ನನಗೆ ಅನಿಸಿದಾಗ ಖಂಡಿತ ಮದುವೆ ಆಗುತ್ತೇನೆ” ಎಂದು ಧನಂಜಯ್ ಹೇಳಿದ್ದಾರೆ. ನಟ ನಾಗಭೂಷಣ್ ಕೂಡ ಧನಂಜಯ ಜೊತೆ ಪಾದಯಾತ್ರೆ ಹೊರಟ ಯುವಕರಿಗೆ ಶುಭ ಹಾರೈಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada