ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವಿನ ಪ್ರಯಾಣದ ಅವಧಿ ತಗ್ಗಿಸುವ ಮತ್ತು ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳ ಬೆಸುಗೆಗಾಗಿ ನಿರ್ಮಾಣಗೊಂಡಿರುವ ದಶಪಥ ರಸ್ತೆಯು ರಾಜಧಾನಿಯ ವಾಹನ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.ಬೆಂಗಳೂರು ಮತ್ತು ಮೈಸೂರು ನಡುವೆ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಕಚೇರಿ, ವೈಯಕ್ತಿಕ ಕೆಲಸ ಹಾಗೂ ಜೀವನೋಪಾಯಕ್ಕಾಗಿ ಲಕ್ಷಾಂತರ ಮಂದಿ ಉಭಯ ನಗರಗಳ ನಡುವೆ ಸಂಚರಿಸುತ್ತಿದ್ದಾರೆ. ಉಭಯ ನಗರಗಳ ನಡುವಿನ ಪ್ರಯಾಣದ ಪ್ರಯಾಸ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಮಾರು 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ದಶಪಥ ರಸ್ತೆ ನಿರ್ಮಾಣ ಮಾಡಿದೆ.
ದಶಪಥ ರಸ್ತೆ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಹಾಗೂ ಮೈಸೂರು ನಡುವೆ ಹಳೆ ರಸ್ತೆಯಲ್ಲಿ ಪ್ರಯಾಣಕ್ಕೆ ಕನಿಷ್ಠ 3 ತಾಸು ಹಿಡಿಯುತ್ತಿತ್ತು. ದಶಪಥ ರಸ್ತೆಯಲ್ಲಿ ಪ್ರಯಾಣದ ಅವಧಿ ಒಂದೂವರೆ ತಾಸಿಗೆ ಇಳಿದಿದೆ. ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆ ಆಗಿರುವುದಕ್ಕೆ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಮೈಸೂರಿನಿಂದ ಶರವೇಗದಲ್ಲಿ ಬರುವ ವಾಹನಗಳು ನಗರ ಪ್ರವೇಶಿಸುತ್ತಿದ್ದಂತೆಯೇ ಆಮೆವೇಗದಲ್ಲಿ ಸಾಗುವಂತಾಗಿದೆ.ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಎಕ್ಸ್ಪ್ರೆಸ್ ಕಾರಿಡಾರ್ ಅಂತ್ಯಗೊಂಡ ನಂತರ ಟ್ರಾಫಿಕ್ ಜಾಮ್ನ ಕರಾಳಮುಖದ ದರ್ಶನವಾಗುತ್ತದೆ. ಕೇವಲ 90 ನಿಮಿಷದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುವ ನಾಗರಿಕರ ಖುಷಿ ಟ್ರಾಫಿಕ್ ಜಾಮ್ ಬಿಸಿಯಲ್ಲಿ ಕರಗಿ ಹೋಗುತ್ತದೆ. ಎಕ್ಸ್ಪ್ರೆಸ್ ಕಾರಿಡಾರ್ನ ಮೇಲ್ಸೇತುವೆಯ 3 ಪಥ, ಸೇತುವೆ ಕೆಳಗಿನ ದ್ವಿಪಥ ರಸ್ತೆ ಹಾಗೂ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ಒಟ್ಟುಗೂಡಿ ಮುಂದೆ ಸಾಗಬೇಕಿದೆ. ಮೇಲ್ಸೇತುವೆಯಿಂದ ಇಳಿಯುತ್ತಿದ್ದಂತೆ ರಸ್ತೆ ಕಿರಿದಾಗುವುದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವಿಲ್ಲದೆ ದಟ್ಟಣೆಯಾಗುತ್ತಿದೆ. ಅಂದರೆ 5 ಪಥದಲ್ಲಿ ಬರುವ ವಾಹನಗಳು ದ್ವಿಪಥದ ರಸ್ತೆಯಲ್ಲಿ ಸಾಗಬೇಕಿದ್ದು, ಇದು ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada