ಬಿಡಿಎ ಮತ್ತು ಬಿಬಿಎಂಪಿಗೆ ಸೇರಿದ ಯಾವುದೇ ಜಾಗವನ್ನು ಒತ್ತುವರಿ ಮಾಡಲು ಬಿಡುವುದಿಲ್ಲ. ಭೂಸ್ವಾಧೀನ ಮತ್ತು ಸ್ವತ್ತುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಸ್ಪಷ್ಟತೆ ತರಲು ತಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಸದಸ್ಯ ಮರಿತಿಬ್ಬೇಗೌಡ, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಬಳಿ ಬಿಡಿಎಗೆ ಸೇರಿದ 23 ಗುಂಟೆ ಜಮೀನು ಒತ್ತುವರಿಯಾಗಿದೆ. ಈ ಸಂಬಂಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಬಿಡಿಎ ಮತ್ತು ಬಿಬಿಎಂಪಿ ಸ್ಥಳವನ್ನು ಯಾರೇ ಆಕ್ರಮಿಸಿದರೂ ಅದನ್ನು ತಕ್ಷಣವೇ ತೆರವುಗೊಳಿಸಲು ಕ್ರಮ ವಹಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿಸುತ್ತೇನೆ. ಬಿಡಿಎ ತನ್ನದೇ ಆದ ಕಾಯಿದೆಯನ್ನು ಹೊಂದಿದೆ. ನಿರ್ದಿಷ್ಟ ಉದ್ದೇಶವನ್ನು ಪ್ರಸ್ತಾಪಿಸಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಬಳಿಕ ಹೆಚ್ಚುವರಿ ಎಂದು ಕಂಡು ಬಂದ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡಲಾಗುವುದು. ನಿಯಮಾನುಸಾರ ಅಂತಿಮ ಅಧಿಸೂಚನೆ ಜಾರಿಯಾದ ಬಳಿಕ ಯಾವ ಕಾರಣಕ್ಕೂ ಭೂಮಿಯನ್ನು ಕೈ ಬಿಡಲು ಸಾಧ್ಯವಿಲ್ಲ ಎಂದರು.ಈ ನಡುವೆ ಭೂಮಾಲೀಕರು ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ವಿವಿಧ ರೀತಿಯಲ್ಲಿ ತಗಾದೆ ತೆಗೆದು ನ್ಯಾಯಾಲಯದ ಮೊರೆ ಹೊಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ತೀರ್ಪು ಸರಕಾರದ ಪರವಾಗಿ ಬಂದಿದ್ದರೆ, ಮತ್ತಷ್ಟು ಪ್ರಕರಣಗಳಲ್ಲಿಇದು ವಿರುದ್ಧವಾಗಿದೆ,” ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada