ಯಾರು ಯಾರನ್ನೂ ಮುಗಿಸಲು ಆಗುವುದಿಲ್ಲ. ಅಂಥ ಮಾತುಗಳನ್ನು ರಮೇಶ್ ಜಾರಕಿಹೊಳಿಯವರು ಹೇಳಲೂಬಾರದು ಎಂದು ಮಾಜಿ ಸಚಿವ ಎಚ್. ವಿಶ್ವನಾಥ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ಸಿ.ಡಿ ವಿಷಯ ಕುರಿತು ಡಿ.ಕೆ. ಶಿವಕುಮಾರ ಮೇಲೆ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಒಟ್ಟಿಗೆ ಸೇರಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ. ನಾವೆಲ್ಲ ಒಟ್ಟಿಗೇ ಇದ್ದವರು. ರಮೇಶ ಹಾಗೆಲ್ಲ ಮಾತನಾಡಬಾರದು ಎಂದು ಡಿಕೆಶಿ ಪರ ಮೃದು ಧೋರಣೆ ತಳೆದಿದ್ದಾರೆ.
ಈ ಸರ್ಕಾರದಲ್ಲಿ ಕೇಳಿಬರೋದು ಬರೀ ದುಡ್ಡು, ದುಡ್ಡು ಎಂಬ ಶಬ್ದ. ಶಾಲೆಗಳಿಗೆ ಕಾವಿಬಣ್ಣ ಹೊಡೆಯುವುದೂ ಒಂದು ಯೋಜನೆಯೇ ಎಂದು ಪ್ರಶ್ನಿಸಿದ ಅವರು ಇವರೆಲ್ಲ ಸೇರಿ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.
ಚುನಾವಣೆಯೇ ಪ್ರಜಾಪ್ರಭುತ್ವದ ಆತ್ಮ, ಆದರೆ ಬಿಜೆಪಿಯ ಅಯೋಗ್ಯ ಸರ್ಕಾರ ಮತದಾರರ ಹೆಸರನ್ನೇ ಡಿಲೀಟ್ ಮಾಡುವ ಮೂಲಕ ಅವರ ಅತ್ಮವನ್ನೇ ಕಸಿಯುತ್ತಿದೆ ಎಂದು ಅವರು ಖಂಡಿಸಿದರು.
೪೦ ಪರ್ಸೆಂಟ್ ಕಮೀಷನ್ ಕುರಿತಂತೆ ಪ್ರತಿಕ್ರಿಯಿಸುತ್ತ, ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳು ಪುಡಿರೌಡಿತರಹ ನೀನು ಕದ್ದಿಲ್ಲವೇ ನೀನು ಕದ್ದಿಲ್ಲವೇ ಎಂದು ಮಾತನಾಡುತ್ತಾರೆ. ಇದು ನಮಗೆಲ್ಲ ಆದರ್ಶವೇ ಎಂದು ವಿಶ್ವನಾಥ ಪ್ರಶ್ನಿಸಿದರು.
ನನ್ನನ್ನು ಸೇರಿಸಿ ರಾಜಕೀಯ ನಾಯಕರೆಲ್ಲ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಮೌಲ್ಯ ಕಳೆದುಕೊಂಡ ಮೇಲೆ ಯಾರ ಮುಂದೆ ನಿಲ್ಲುವುದು? ನಾವೆಲ್ಲ ಚುನಾವಣೆಗೆ ನಿಲ್ಲಲು ಆಗುವುದಿಲ್ಲ ಎಂದು ಅವರು ನುಡಿದರು. ನಾನು ೫೦ ವರ್ಷಗಳಿಂದ ರಾಜಕಾರಣ ನೋಡಿದ್ದೇನೆ. ರಾಜಕಾರಣ ತೀವ್ರ ಹೊಲಸಾಗಿದೆ. ಅದು ಸ್ವಚ್ಛವಾಗಬೇಕಿದೆ ಎಂದ ಅವರು, ಇಂದು ಸೇವಾ ರಾಜಕಾರಣ ನಿಂತು ಹೋಗಿರುವುದು ವಿಷಾದನೀಯ ಎಂದು ಹೇಳಿದರು.
https://play.google.com/store/apps/details?id=com.speed.newskannada