ನಟಿ ಹೇಮಾಮಾಲಿನಿ ಗರಂ ಆಗಿದ್ದಾರೆ. ಕೋಪದಿಂದ ಕೆನ್ನೆ ಕೆಂಪಾಗಿಸಿಕೊಂಡಿದ್ದಾರೆ. ಹೇಮಾಮಾಲಿನಿ ಕೋಪಕ್ಕೆ ಕಾರಣ ಅವರ ಕೆನ್ನೆಯೇ!
ಹೌದು, ಉತ್ತರ ಭಾರತದ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಚುನಾವಣೆ ಪ್ರಚಾರದ ಸಮಯದಲ್ಲಿ ಹೇಮಾಮಾಲಿನಿ ಉಲ್ಲೇಖ ತೀರ ಸಾಮಾನ್ಯ.
”ಅದೆಷ್ಟು ಒಳ್ಳೆಯ ರಸ್ತೆ ಮಾಡುತ್ತೇವೆಂದರೆ ಹೇಮಾಮಾಲಿನಿ ಕೆನ್ನೆಗಿಂತಲೂ ನುಣುಪಾಗಿರುತ್ತದೆ” ಎಂಬುದು ಉತ್ತರದ ಕೆಲವು ರಾಜಕಾರಣಿಗಳು ಸಾಮಾನ್ಯವಾಗಿ ಬಳಸುವ ಹೋಲಿಕೆ. ಬಹಳ ವರ್ಷಗಳಿಂದಲೂ ಈ ಹೇಳಿಕೆಯನ್ನು ನೀಡುತ್ತಾ ಬರುತ್ತಿದ್ದಾರಾದರೂ ರಸ್ತೆಗಳಂತೂ ಹೇಮಾಮಾಲಿನಿ ಕೆನ್ನೆಯಂತಾಗಿಲ್ಲ.
ಆದರೆ ತಮ್ಮ ಕೆನ್ನೆಯನ್ನು ಸುಳ್ಳು ಭರವಸೆ ನೀಡಲು ಬಳಸುವ ರಾಜಕಾರಣಿಗಳ ವಿರುದ್ಧ ಇದೀಗ ನಟಿ ಹೇಮಾಮಾಲಿನಿ ಗರಂ ಆಗಿದ್ದಾರೆ.
ಮಹಾರಾಷ್ಟ್ರದ ನೀರಾವರಿ ಸಚಿವ ಗುಲಾಬ್ರಾವ್ ಪಾಟೀಲ್ ಇತ್ತೀಚಿಗೆ ತಮ್ಮ ವಿಧಾನಸಭೆ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ”ನನ್ನ ವಿಧಾನಸಭೆ ಕ್ಷೇತ್ರದಲ್ಲಿ ಬಹಳ ಚೆನ್ನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ನಿರ್ಮಿಸಿದ ರಸ್ತೆಗಳು ಹೇಮಾಮಾಲಿನಿ ಕೆನ್ನೆಗಿಂತಲೂ ನುಣುಪಾಗಿದೆ” ಎಂದಿದ್ದರು. ಆ ನಂತರ ಈ ಬಗ್ಗೆ ಕ್ಷಮೆಯನ್ನೂ ಕೇಳಿದರು.
ಆದರೆ ಈ ಬಗ್ಗೆ ಗರಂ ಆಗಿರುವ ಹೇಮಾಮಾಲಿನಿ, ”ಈ ರೀತಿ ಹೇಳುವುದು ಸರಿಯಲ್ಲ. ಅದರಲ್ಲಿಯೂ ಚುನಾಯಿತ ಪ್ರತಿನಿಧಿಯೊಬ್ಬರು ಮಹಿಳೆಯ ಬಗ್ಗೆ ಹೀಗೆ ತಮಾಷೆಯಾಗಿ ಮಾತನಾಡುವುದು ಸದಭಿರುಚಿ ಅಲ್ಲ” ಎಂದಿದ್ದಾರೆ.
ಇದೇ ವಿಷಯವಾಗಿ ಸುದ್ದಿ ಮಾಧ್ಯಮದೊಂದಿಗೆ ತಮಾಷೆಯಾಗಿ ಮಾತನಾಡಿದ ಹೇಮಾಮಾಲಿನಿ, ”ನಾನು ನನ್ನ ಕೆನ್ನೆಗಳನ್ನು ಹುಷಾರಾಗಿ ನೋಡಿಕೊಳ್ಳಬೇಕು” ಎಂದಿದ್ದಾರೆ.
ಹೇಮಾಮಾಲಿನಿ ಕೆನ್ನೆ ಬಗ್ಗೆ ಮಾತನಾಡಿದ್ದ ಸಚಿವ ಗುಲಾಬ್ರಾವ್ ಪಾಟೀಲ್ ಈಗಾಗಲೇ ಕ್ಷಮಾಪಣೆ ಕೇಳಿದ್ದಾರೆ. ”ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಯಾರನ್ನೂ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ನಾನು ಹಾಗೆ ಮಾತನಾಡಿರಲಿಲ್ಲ” ಎಂದಿದ್ದಾರೆ.
ಹೇಮಾಮಾಲಿನಿ ಕೆನ್ನೆಯ ಉಪಮೆ ಕೊಡುವ ಟ್ರೆಂಡ್ ಆನ್ನು ಆರಂಭಿಸಿದ್ದು ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್. ಹೇಮಾಮಾಲಿನಿ ಅಭಿಮಾನಿ ಆಗಿದ್ದ ಲಾಲೂ ಪ್ರಸಾದ್ ಯಾದವ್, ”ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಗಳಿಗಿಂತಲೂ ನುಣುಪಾಗಿ ಮಾಡುತ್ತೇನೆ” ಎಂದು ಭರವಸೆ ನೀಡಿದ್ದರು. ಲಾಲೂ ಪ್ರಸಾದ್ ಅವರ ಈ ಹೇಳಿಕೆಯನ್ನು ಈಗಲೂ ಒಬ್ಬರಲ್ಲಾ ಒಬ್ಬರು ರಾಜಕಾರಣಿಗಳು ಬಳಸುತ್ತಲೇ ಇರುತ್ತಾರೆ.
1999 ರಿಂದಲೂ ರಾಜಕೀಯದಲ್ಲಿರುವ ಹೇಮಾಮಾಲಿನಿ 2004 ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದ ಹೇಮಾಮಾಲಿನಿ, 2014 ಹಾಗೂ 2019 ರಲ್ಲಿ ಮಥುರಾ ಲೋಕಸಭೆ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: