ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಮಧ್ಯೆ ಆರೋಪ–ಪ್ರತ್ಯಾರೋಪಗಳ ಜಟಾಪಟಿ ಮುಂದುವರೆದಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರ ನಿಖಿಲ್ ಸೋಲಲು ಸಿದ್ದರಾಮಯ್ಯನೇ ಕಾರಣ ಎಂಬ ಹೆಚ್ ಡಿಕೆ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನನಗೆ ಮಂಡ್ಯದಲ್ಲಿ ಸೋಲಿಸುವ ಶಕ್ತಿ ಇದೆಯಲ್ಲ. ಮಂಡ್ಯದಲ್ಲಿ ಸೋಲಿಸುವ ಶಕ್ತಿಗೆ ಬೆನ್ನು ತಟ್ರಯ್ಯ ಎಂದು ವ್ಯಂಗ್ಯವಾಡಿದರು. ಹಾಗಾದ್ರೆ ಹಾಸನದಲ್ಲಿ ಗೆಲ್ಲಿಸಿದ್ದು ಯಾರು ಎಂದು ಪ್ರಶ್ನಿಸಿದರು. ಕಳೆದ ಲೋಕಸಭಾ ಚುನವಾಣೆಯಲ್ಲಿ ಜೆಡಿಎಸ್ ಹಾಸನದಲ್ಲಿ ಮಾತ್ರ ಗೆಲುವನ್ನು ಕಂಡಿತ್ತು.
ಯಡಿಯೂರಪ್ಪ ಮೇಲೆ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ. ಯಡಿಯೂರಪ್ಪ ಈಗ ಮುಖ್ಯಮಂತ್ರಿ ಅಲ್ಲ, ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಇದ್ದಾರೆ. ಅಧಿಕಾರದಲ್ಲಿರುವವರ ಬಗ್ಗೆ ನಾವು ಮಾತನಾಡಬೇಕು. ನಾನು ವ್ಯಕ್ತಿ ಬಗ್ಗೆ ಮಾತನಾಡಲ್ಲ, ವಿಷಯದ ಮೇಲೆ ಮಾತ್ರ ನನ್ನ ಆಕ್ಷೇಪ ಎಂದು ಸ್ಪಷ್ಟನೆ ನೀಡಿದರು. ಇನ್ನು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹೆಚ್.ವಿಶ್ವನಾಥ್ , ಈಗಲೂ ಅದೇ ಪಕ್ಷದಲ್ಲಿ ಮುಂದುವರೆದಿದ್ದಾರೆ. ಬಿಜೆಪಿಗೆ ರಾಜೀನಾಮೆ ಬಿಸಾಕಿ ಹೋಗಲಿ ಎಂದು ಸವಾಲೆಸೆದರು.
ಇನ್ನು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಸಚಿವರಾದ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಮಧ್ಯೆ ನಡೆದ ಜಟಾಪಟಿಯಲ್ಲಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು. ಇವರೆಲ್ಲ ದೇಶಭಕ್ತರು, ಇದಕ್ಕಾಗಿ ಜಗಳ ಮಾಡುತ್ತಾರೆ. ಬೆಂಗಳೂರು ಉಸ್ತುವಾರಿ ಮಂತ್ರಿಯಾದರೆ ಅವರಿಗೆ ಅನುಕೂಲ, ಬೇರೆ ಬೇರೆ ರೀತಿಯಲ್ಲಿ ಅನುಕೂಲ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಇದೆಲ್ಲಾ ಪೈಪೋಟಿ ಎಂದು ಕುಟುಕಿದರು. ಬಡವರ ರಕ್ತ ಯಾಕೆ ಕುಡಿತ್ತೀರಾ..?
ಡಿಸೆಲ್–ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಇದೆ, ನಿರೀಕ್ಷಿತ ತೆರಿಗೆ ಸಂಗ್ರಹ ಆಗಿಲ್ಲ ಎಂದರೆ? ಬಡವರ ರಕ್ತ ಕುಡಿಯುತ್ತೀರಾ? ಕಾರ್ಪೋರೇಟ್ ತೆರಿಗೆ ಹೆಚ್ಚು ಮಾಡಿ, ಇಡೀ ದೇಶದ ಆರ್ಥಿಕತೆ ಕಡಿಮೆಯಾಗಿದೆ. ಕಾರ್ಪೋರೆಟ್ ವ್ಯಕ್ತಿಗಳ ಆದಾಯ ಜಾಸ್ತಿಯಾಗಿದೆ. ಬಡವರ ಮನೆ ಹಾಳು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇನ್ನು ದೇಶದಲ್ಲಿ ಉಂಟಾಗಿರುವ ಕಲ್ಲಿದ್ದಲು ಸಮಸ್ಯೆ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಕಲ್ಲಿದ್ದಲು ಕೊರತೆ ಯಾಕಾಗಿ ಆಗಿದೆ. ಕೃತಕ ಕಲ್ಲಿದ್ದಿಲು ಅಭಾವ ಸೃಷ್ಟಿಸಿದ್ದಾರಾ, ಕಲ್ಲಿದ್ದಿಲು ಶಾಖೋತ್ಪನ್ನ ಕಡಿಮೆ ಮಾಡಲಾಗಿದೆ. ಕಲ್ಲಿದ್ದಿಲು ಹೆಚ್ಚು ಪ್ರಮಾಣದಲ್ಲಿ ಬೇಕಿಲ್ಲ. ಖಾಸಗಿಯವರಿಗೆ ಕೊಡಲು ಇದೆಲ್ಲ ಮಾಡುತ್ತಿರುವ ಗುಮಾನಿ ಇದೆ. ನನಗೆ ಇದರ ಬಗ್ಗೆ ಅನುಮಾನ ಇದೆ. ಜಲವಿದ್ಯುತ್, ಪವನ, ಸೋಲಾರ್ ಸಾಕಷ್ಟು ಉತ್ಪಾದನೆ ಮಾಡುತ್ತಿದೆ. ಅವಶ್ಯಕತೆಗೂ ಹೆಚ್ಚು ವಿದ್ಯುತ್ ಇದೆ, ಆದರೂ ವಿದ್ಯುತ್ ಅಭಾವ ಕಾರಣ ಹೇಳುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.
ಇನ್ನು ಕಳೆದ ಕೆಲ ದಿನಗಳಿಂದ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಸೋನಿಯಾ ಜೊತೆ ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚೆಯಾಗಿಲ್ಲ. ಸೋನಿಯಾ ಗಾಂಧಿ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿಲ್ಲ. ಈ ಬಗ್ಗೆ ನಾನು ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದೇನೆ. ಆದರೂ ಇದೇ ಸುದ್ದಿ ಮುಂದುವರಿಸಿದರೆ ಏನು ಮಾಡುವುದು. ಯಾರದ್ದೋ ಮಾತು ಕೇಳಿ ಸುಳ್ಳು ಸುದ್ದಿ ಮಾಡಬಾರದು, ನನಗೆ ರಾಷ್ಟ್ರ ರಾಜಕಾರಣ ದ ಬಗ್ಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..