ಬೆಂಗಳೂರು: ರಾಜ್ಯದ ವಿಶೇಷ ವರ್ಗದ ಫಲಾನುಭವಿಗಳಿಗೆ 25,000 ಆಶ್ರಯ ಮನೆಗಳನ್ನು ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ, ಈ ವರ್ಗದಡಿ ಹಿಂದಿನ ಸರಕಾರದಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಿ ಹೊಸ ಫಲಾನುಭವಿಗಳ ಆಯ್ಕೆ ಮಾಡಲು ಸರಕಾರ ನಿರ್ಧರಿಸಿದೆ.ರಾಜ್ಯ ಸರಕಾರ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ವಿಧವೆಯರು, ಅಂಗವಿಕಲರು, ತೃತೀಯ ಲಿಂಗಿಗಳು, ಪರಿತ್ಯಕ್ತರು ಸೇರಿದಂತೆ ಸುಮಾರು 67 ವರ್ಗಗಳ ಜನರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡುತ್ತದೆ. ಅನೇಕ ವರ್ಷಗಳಿಂದ ಈ ವರ್ಗಗಳ ಜನರಿಗೆ ಮನೆ ಹಂಚಿಕೆ ಮಾಡಿಲ್ಲ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಮೈತ್ರಿ ಸರಕಾರ ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿ ವಿಶೇಷ ವರ್ಗಗಳಿಗೆ ಯಾವುದೇ ಮನೆಗಳು ಹಂಚಿಕೆಯಾಗಿಲ್ಲ.ಜಿಲ್ಲಾಧಿಕಾರಿಗಳ ಸಮಿತಿ ಆಯ್ಕೆರಾಜೀವ್ ಗಾಂಧಿ ವಸತಿ ನಿಗಮ ಜಿಲ್ಲಾವಾರು ಮನೆಗಳನ್ನು ಹಂಚಿಕೆ ಮಾಡಿದ ಅನಂತರ ಜಿಲ್ಲಾಧಿಕಾರಿಗಳ ನೇತೃತ್ವದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಯಲ್ಲಿ ಪಂಚಾಯತ್ವಾರು ವಿವಿಧ ವಿಶೇಷ ವರ್ಗಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ನಿಗಮಕ್ಕೆ ಕಳುಹಿಸಲಾಗುತ್ತದೆ. ಅನಂತರ ರಾಜೀವ್ ಗಾಂಧಿ ನಿಗಮದಿಂದ ಫಲಾನುಭವಿಗಳಿಗೆ ಅಧಿಕೃತ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.53 ಸಾವಿರ ರದ್ದು?ಈಗಿರುವ ಮಾಹಿತಿ ಪ್ರಕಾರ ರಾಜ್ಯ ಸರಕಾರ ಹಿಂದಿನ ಸರಕಾರದ ಅವಧಿಯಲ್ಲಿ ಆಯ್ಕೆಯಾಗಿರುವ ವಿಶೇಷ ವರ್ಗಗಳ ಸುಮಾರು 53 ಸಾವಿರ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಿದ್ದು, ಹೊಸದಾಗಿ ಮತ್ತೆ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲು ರಾಜೀವ್ ಗಾಂಧಿ ವಸತಿ ನಿಗಮ ತೀರ್ಮಾನಿಸಿದೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada