ಲಕ್ನೋ, ಫೆಬ್ರವರಿ 5: ಕಾಂಗ್ರೆಸ್ ಪಕ್ಷವು 30 ವರ್ಷಗಳಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾಹಿತಿ ನೀಡಿದ್ದಾರೆ.ಉತ್ತರ ಪ್ರದೇಶದ ಚುನಾವಣೆಯಲ್ಲಿ ಪ್ರಚಾರದ ಕಾವು ಏರಿದ್ದು, ಫೆ.10 ರಂದು ಮೊದಲ ಹಂತದ ಮತದಾನ ನಡೆಯಲಿದೆ.2, 3, 4, 5, 6 ಹಾಗೂ 7ನೇ ಹಂತದ ಮತದಾನ ಕ್ರಮವಾಗಿ ಫೆ.14, ಫೆ,20, ಫೆ,23, ಫೆ,27, ಮಾ.3 ಮತ್ತು ಮಾ.7 ರಂದು ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬರಲಿದೆ.ಘಾಜಿಯಾಬಾದ್ನಲ್ಲಿ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಕಾಂಗ್ರೆಸ್ ಪ್ರಿಯಾಂಕಾ, ನಾವು ನಮ್ಮ ಸಾಮರ್ಥ್ಯದಿಂದ ಹೋರಾಡುತ್ತೇವೆ. ಕಳೆದ 30 ವರ್ಷಗಳಲ್ಲಿ ಮೊದಲ ಸಲ ಎಲ್ಲ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದೇವೆ ಎಂದಿದ್ದಾರೆ.ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲ್ಲ ಎಂದು ಯುಪಿ ಸ್ಟಾರ್ ಪ್ರಚಾರಕ ಸಚಿನ್ ಪೈಲಟ್ ಈ ಮೊದಲು ತಿಳಿಸಿದ್ದರು. 2004, 2009, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ರಾಯಬರೇಲಿ ಕ್ಷೇತ್ರದಿಂದ ಎಸ್ಪಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಆದ್ರೆ 2019ರಲ್ಲಿ ರಾಹುಲ್ ಗಾಂಧಿ ಕಣಕ್ಕಿಳಿದಿದ್ದ ಅಮೇಥಿ ಕ್ಷೇತ್ರದಿಂದ ಎಸ್ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮ್ಮುಖದಲ್ಲಿ ಗಾಜಿಯಾಬಾದ್ನಲ್ಲಿ ಶುಕ್ರವಾರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಿಯಾಂಕಾ ಗಾಂಧಿ ನಾವು ಈ ಬಾರಿ ಚುನಾವಣೆಯಲ್ಲಿ ನಮ್ಮ ಸರ್ವ ಶಕ್ತಿಯನ್ನೂ ಧಾರೆಯೆರೆಯುತ್ತಿದ್ದೇವೆ. ಹಾಗಾಗಿ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ ಎಂದರು.ಪ್ರಮುಖ ರಾಜಕೀಯ ಪಕ್ಷಗಳು ತಂತ್ರ ಪ್ರತಿ ತಂತ್ರ ಹೂಡುತ್ತಿವೆ. ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಬಹುದಾದಂತಹ, ದಿಕ್ಸೂಚಿ ಆಗಬಹುದಾದಂತಹ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳೂ ಅಣಿಯಾಗಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ತನ್ನ ಪರಾಕ್ರಮ ಮೆರೆಯಲು ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಇಂದಿರಾ ಗಾಂಧಿ ಕುಟುಂಬದ ರಾಜಕೀಯ ಪಡಸಾಲೆ ಎಂದೇ ಪರಿಗಣಿತವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಚುನಾವಣಾ ಸಾರಥ್ಯ ವಹಿಸಿದಂತಿದೆ.ಮೊದಮೊದಲು ಮುಂದಿನ ಮುಖ್ಯಮಂತ್ರಿ ತಾನೇ ಎಂದು ಎಂದು ಪ್ರಿಯಾಂಕಾ ಘೋಷಿಸಿಕೊಂಡಿದ್ದರಾದರೂ, ಮರು ಘಳಿಗೆಯಲ್ಲಿಯೇ ತಾನು ಒಲ್ಲೆ ಅಂದುಬಿಟ್ಟರು. ಇದೀಗ ಮತ್ತೊಂದು ಸ್ಟ್ರಾಟೆಜಿಕ್ ಮೂವ್ನಲ್ಲಿ ಉತ್ತರ ಪ್ರದೇಶದ ಅಷ್ಟೂ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲಿದೆ ಎಂದು ಪ್ರಿಯಾಂಕಾ ಘೋಷಿಸಿದ್ದಾರೆ.ಚುನಾವಣೆ ಬಿಸಿಯಲ್ಲಿ ಇದು ಪ್ರಿಯಾಂಕಾ ಗಾಂಧಿ ಕಡೆಯಿಂದ ಮತ್ತೊಂದು ಯಡವಟ್ಟಿನ ಹೇಳಿಕೆಯಾಗಿದೆ. ಏಕೆಂದರೆ ಸಮಾಜವಾದಿ ಪಕ್ಷದತ್ತ ರಾಜಕೀಯ ಒಲವು ಹೊಂದಿರುವ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷದತ್ತ ಸದಾ ಕಾಲ ಒಲವು, ಕೃಪೆ ಬೀರುತ್ತಾ ಬಂದಿದೆ. ಈ ಹಿಂದೆ SP ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಅಂಕಲ್ ಶಿವ್ಪಾಲ್ ಸಿಂಗ್ ಯಾದವ್ ಅವರ ವಿರುದ್ಧ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ.ಅದರೊಂದಿಗೆ ಅವರ ಗೆಲುವಿಗೆ ನೆರವಾಗಿದ್ದರು. ಅಂದರೆ ಕಾಂಗ್ರೆಸ್ ಕಡೆಯಿಂದ ಇದು ಒಂದು ರೀತಿಯಲ್ಲಿ ರಾಜಕೀಯ ಋಣ ಸಂದಾಯವಾಗಿತ್ತು. ಅಂದರೆ ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ಬರೇಲಿಯಿಂದ ಕಣಕ್ಕೆ ಇಳಿದಾಗಲೆಲ್ಲ ಸಮಾಜವಾದಿ ಪಕ್ಷ ತನ್ನ ಕಡೆಯಿಂದ ಅಭ್ಯರ್ಥಿಯನ್ನು ನಿಲ್ಲಿಸುತ್ತಿರಲಿಲ್ಲ. ಅದರೊಂದಿಗೆ ಸೋನಿಯಾ ಗೆಲುವಿಗೆ ನೆರವಾಗುತ್ತಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada