ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗಿಲ್ಲ. ದೀರ್ಘ ರಜೆಯಿಂದ ಮಕ್ಕಳು ಕಲಿಕೆಯಿಂದ ದೂರವಾಗಿದ್ದಾರೆ. ವಿದ್ಯಾರ್ಥಿಗಳ ಈ ಕಲಿಕಾ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದ ಶಾಲೆಗಳ ಬೇಸಿಗೆ ರಜೆಯನ್ನು, ಈ ಬಾರಿ 15 ದಿನಗಳ ಕಾಲ ಕಡಿತಗೊಳಿಸುವ ಸಾಧ್ಯತೆ ಇದೆ.ಸಾಂಕ್ರಾಮಿಕದ ಕಾರಣದಿಂದ ಸುದೀರ್ಘ ಅವಧಿಗೆ ಶಾಲೆಗಳು ಮುಚ್ಚಿದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷವನ್ನು 15 ದಿನ ಮೊದಲು ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ಹೇಳಿವೆ.ಮಕ್ಕಳಲ್ಲಿನ ಕಲಿಕಾ ಅಂತರ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ನಷ್ಟವನ್ನು 15 ದಿನಗಳಲ್ಲಿ ಭರ್ತಿ ಮಾಡುವುದು ದೊಡ್ಡ ಸವಾಲು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈಗ ಶಾಲೆಗಳಿಗೆ ನೀಡಿರುವ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ 29ರಂದು ಬೇಸಿಗೆ ರಜೆ ಆರಂಭವಾಗಿ ಮೇ 30ಕ್ಕೆ ಕೊನೆಗೊಳ್ಳಲಿದೆ. ಆದರೆ ಪರಿಷ್ಕೃತ ಯೋಜನೆಯ ಪ್ರಕಾರ, ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 15ಕ್ಕೇ ಆರಂಭವಾಗಲಿವೆ.ಅಧ್ಯಯನ ವರದಿಗಳ ಪ್ರಕಾರ, ಕಲಿಕಾ ನಷ್ಟ ಮತ್ತು ಕಲಿಕಾ ಅಂತರ ದೊಡ್ಡದಾಗಿದೆ. ಇವೆಲ್ಲವನ್ನೂ 15 ದಿನಗಳ ಅವಧಿಯಲ್ಲಿ ನಾವು ಮರು ಪಡೆದುಕೊಳ್ಳಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಇದೇ ವೇಳೆ ಗಣಿತ, ಇತಿಹಾಸ ಮತ್ತು ವ್ಯಾಕರಣ ವಿಷಯಗಳಲ್ಲಿ ಆಗಿರುವ ದೊಡ್ಡ ನಷ್ಟವನ್ನು ತುಂಬಬೇಕಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ಕೆಲ ವಿಷಯಗಳಲ್ಲಿ ಹಿಂದಿನ ತರಗತಿಯ ಪಾಠಗಳು ಮುಂದುವರಿಯುತ್ತವೆ. ಇವುಗಳನ್ನು ಪುನರಾವರ್ತಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಶಿಕ್ಷಕರನ್ನು ರಜೆ ರಹಿತ ಉದ್ಯೋಗಿಗಳು ಎಂದು ಪರಿಗಣಿಸಿ ಅದಕ್ಕೆ ಅನುಸಾರವಾಗಿ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸುತ್ತಿದ್ದಾರೆ.ಮಕ್ಕಳ ಹಿತದೃಷ್ಟಿಯಿಂದ ಬೇಸಿಗೆ ರಜೆಯ ಸಮಯದಲ್ಲೂ ಅವರಿಗೆ ಪಾಠ ಮಾಡಲೂ ನಾವು ಸಿದ್ಧರಿದ್ದೇವೆ. ಕೊರೋನಾ ದೀರ್ಘರಜೆಯಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕಡಿಮೆಯಾಗಿದೆ ಹಾಗೂ ಕಲಿಕಾ ಅಂತರವೂ ಹೆಚ್ಚಾಗಿದೆ ಎಂಬುದು ನಮಗೂ ತಿಳಿದಿದೆ. ಆದರೆ ಸರ್ಕಾರ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಚಿಂತಿಸಬೇಕು ಎಂದು ರಾಜ್ಯದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.ಜೊತೆಗೆ ಸರ್ಕಾರವು ಈಗಿರುವ 10 ದಿನಗಳ ಗಳಿಕೆ ರಜೆ ಸೌಲಭ್ಯವನ್ನು 30 ದಿನಗಳವರೆಗೆ ವಿಸ್ತರಿಸಲಿ. ಬೇಸಿಗೆ ರಜೆಯಲ್ಲೂ ನಮ್ಮನ್ನು ಎಸ್ಎಸ್ಎಲ್ಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಎಚ್.ಕೆ. ಮಂಜುನಾಥ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada