ನಿನ್ನೆ ನಡೆದ ವಿಧಾನಸಭೆ ಕಲಾಪ ರಣರಂಗವಾಗಿ ಮಾರ್ಪಾಡಾಗಿತ್ತು. ಅಶ್ವತ್ಥ್ ನಾರಾಯಣ್ ಆಡಿದ್ದ ಹೊಡಿಬಡಿ ಮಾತಿನದ್ದೇ ಚರ್ಚೆ ಜೋರಾಗಿತ್ತು. ಇದ್ರ ಮಧ್ಯೆ ಸ್ಪೀಕರ್ ಆಡಿದ ಆವೇಶದ ಮಾತು ವೀರಶೈವ ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿದೆ. ಈಶ್ವರ್ ಖಂಡ್ರೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಗೌರವವಾಗಿ ಆಡಿದ ಮಾತು ವೀರಶೈವ ಸಮಾಜವನ್ನ ಕೆರಳಿಸಿದೆ.
ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ vs ಈಶ್ವರ್ ಖಂಡ್ರೆ
ನಿನ್ನೆ ಅಶ್ವತ್ಥ್ ನಾರಾಯಣ್ ಹೊಡಿಬಡಿ ಮಾತಿಗೆ ವಿಧಾನಸಭೆ ಕಲಾಪ ರಣರಂಗವಾಗಿತ್ತು. ಈ ಮಧ್ಯೆ ಕಲಾಪವನ್ನ ಹತೋಟಿಗೆ ತರಲು ಸ್ಪೀಕರ್ ಆಡಿದ್ದ ಮಾತು ವೀರಶೈವ ಲಿಂಗಾಯತರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೀಕರ್ ವಿರುದ್ಧ ವೀರಶೈವ ಸಮಾಜ ಪ್ರತಿಭಟನೆ ಮಾಡಿದೆ.
ಸಚಿವ ಅಶ್ವತ್ಥ್ ನಾರಾಯಣ್ ಹೊಡೆದಾಕುವ ಮಾತಿಗೆ ಸದನದಲ್ಲಿ ಚರ್ಚೆ ನಡೀತಿತ್ತು. ಈವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಾಗ ಎದ್ದು ಮಾತನಾಡಲು ಆರಂಭಿಸಿದ್ರು. ಈ ವೇಳೆ ಸ್ಪೀಕರ್ ಅವರನ್ನ ಸಂಬಾಳಿಸಿ ಕೂರಿಸಲು ಯತ್ನಿಸಿದ್ರು. ಆದ್ರೆ, ಸ್ಪೀಕರ್ ಮಾತು ಕೇಳದೇ ಈಶ್ವರ್ ಖಂಡ್ರೆ ಮತ್ತೆ ಎದ್ದು ನಿಂತ್ರು. ಆಗ ನಿಮಗೆ ಸಭೆಯ ಗೌರವ ಗೊತ್ತಿಲ್ವಾ? ನಿಮ್ಮನ್ನೆಲ್ಲಾ ಯಾರು ಆಯ್ಕೆ ಮಾಡುತ್ತಾರೋ? ಅಂತಾ ಆಕ್ರೋಶ ಭರಿತರಾಗಿ ಸ್ಪೀಕರ್ ಕಾಗೇರಿ ಗುಡುಗಿದ್ರು.
ಕೂತ್ಕೊಳ್ರಿ ಒಂದು ನಿಮಿಷ.. ನಾನು ಇದುವರೆಗೂ ಎದ್ದು ನಿಂತಿಲ್ಲ. ಕೂತ್ಕೊಳ್ರಿ ಅಂದ್ರೆ ಕೂತ್ಕೋಬೇಕು. ಈಶ್ವರ್ ಖಂಡ್ರೆ ಅವರೇ ನೀವು ಅತೀಯಾಗಿ ಈ ಸದನದಲ್ಲಿ ವರ್ತಿಸುತ್ತಿದ್ದೀರಿ. ಇದು ಈ ಸದನಕ್ಕೆ ಶೋಭೆ ತರಲ್ಲ. ನೀವು ನಿಮ್ಮ ಪಕ್ಷದ ಅಧ್ಯಕ್ಷರಿದ್ದೀರಿ. ಗೌರವ ತರಲ್ಲ.. ನಿಮ್ಮ ಈ ರೀತಿಯ ಮಾತುಗಳು. ಏನು ಈ ಸದನದಲ್ಲಿ ತಮಾಷೆ ಮಾಡ್ತೀರಿ. ನಿಮ್ಮನ್ನು ಯಾರೀ ಆಯ್ಕೆ ಮಾಡೋರು.. ಜನ ನಿಮ್ಮನ್ನು ಆಯ್ಕೆ ಮಾಡೋರಿಗೆ ಹೇಳ್ತೀವಿ. ನಿಮ್ಮನ್ನ ಆಯ್ಕೆ ಮಾಡಿದ್ರೆ ಈ ವ್ಯವಸ್ಥೆಗೆ ಅಗೌರವ ಎಂದು ಹೇಳ್ತೇವಿ. ಕೂತ್ಕೊಳ್ರಿ ಖಂಡ್ರೆ.. ಹಿರಿತನಕ್ಕೆ ನೀವು ಕಡೋದು ಇದೇನಾ ಗೌರವ. ಇದು ನಡೆದುಕೊಳ್ಳುವ ರೀತಿನಾ..?
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಸದ್ಯ ಈಶ್ವರ್ ಖಂಡ್ರೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಹೇಳನ ಮಾಡಿದ್ದಾರೆ ಅಂತಾ ಬೀದರ್ ಜಿಲ್ಲೆ ಬಾಲ್ಕಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯ್ತು. ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ರು. ಬಾಲ್ಕಿ ಜನತೆಗೆ ಅವಮಾನ ಮಾಡಿದ ಕಾಗೇರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ಬೇಕು ಅಂತಾ ಆಗ್ರಹಿಸಿದ್ರು. ಇತ್ತ ಸ್ಪೀಕರ್ ಕಾಗೇರಿ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಕೂಡಾ ತಿರುಗಿಬಿದ್ದಿದೆ. ಈಶ್ವರ್ ಖಂಡ್ರೆ ಬಗ್ಗೆ ಸ್ಪೀಕರ್ ಲಘುವಾಗಿ ಮಾತನಾಡಿದ್ದಾರೆ. ಹೀಗಾಗಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಪತ್ರದ ಮೂಲಕ ಆಗ್ರಹಿಸಿದೆ.
ಪತ್ರದಲ್ಲೇನಿದೆ?
ಈಶ್ವರ್ ಖಂಡ್ರೆ ಬಗ್ಗೆ ಸದನದಲ್ಲಿ ಸ್ಪೀಕರ್ ಕಾಗೇರಿ ಲಘುವಾಗಿ ಮಾತಾಡಿದ್ದಾರೆ. ಈ ಮೂಲಕ ಅವರಿಂದ ವಿಧಾನಸಭೆ ಸಭಾಧ್ಯಕ್ಷರ ಸ್ಥಾನಕ್ಕೆ ಧಕ್ಕೆಯಾಗಿದೆ. ಚುನಾವಣೆ ಹೊತ್ತಲ್ಲಿ ಹೀಗೆ ಅವಮಾನ ಮಾಡುವುದು ಸರಿಯಲ್ಲ. ಕಾಗೇರಿ ನಡೆದುಕೊಂಡಿದ್ದನ್ನ ರಾಜ್ಯದ ಜನ ನೋಡಿದ್ದಾರೆ. ಇದ್ರಿಂದ ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದ ಕಾಗೇರಿ, ಆ ಸ್ಥಾನ ತ್ಯಜಿಸಬೇಕು. ಇಲ್ಲದಿದ್ರೆ ವೀರಶೈವ ಸಮಾಜದಿಂದ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತೆ ಅಂತಾ ಎಚ್ಚರಿಕೆ ನೀಡಿದೆ.
ಒಟ್ಟಾರೆ, ಬಿಜೆಪಿ ನಾಯಕರು ಒಂದಲ್ಲ ಒಂದು ರೀತಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಚುನಾವಣೆ ಹೊತ್ತಲ್ಲಿ ಜನರ ಆಕ್ರೋಶಕ್ಕೆ ಕಾರಣರಾಗ್ತಿದ್ದಾರೆ. ಬಾಯಲ್ಲಿ ಆಡಿದ್ದನ್ನ ಬೆನ್ನಿಗೆ ಮೂಲ ಮಾಡಿಕೊಳ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada