ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ದೌರ್ಜನ್ಯ ನಡೆಸುತ್ತಿವೆ.ಮೂರು ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು ಕಳೆದ 10 ತಿಂಗಳಿಂದ ಚಳುವಳಿ ಮಾಡುತ್ತಿದ್ದಾರೆ. ಇಂತಹ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಈ ಹಿಂದೆ ಪ್ರತಿಭಟನಾನಿರತ ರೈತರಿಗೆ ಆತ ಪಾಠ ಕಲಿಸುವುದಾಗಿ ಎಚ್ಚರಿಸಿದ್ದು ನಾವೆಲ್ಲ ಮಾಧ್ಯಮಗಳ ಮೂಲಕ ನೋಡಿದ್ದೇವೆ ರೈತರು ನ್ಯಾಯಯುತ ವೇದಿಕೆ ಇಟ್ಟ ಮೇಲೆ ಸ್ಪಂದಿಸಬೇಕಾದದ್ದು ಕೇಂದ್ರ ಸರ್ಕಾರದ ಕೆಲಸ. ಕಾರಣ ಆ ಮೂರು ಕಾನೂನು ಮಾಡಿರುವುದು ಕೇಂದ್ರ ಸರ್ಕಾರ. ಆದರೆ ಇಂದು ರಾಜ್ಯ ಸರ್ಕಾರಗಳಿಗೆ ಕುಮ್ಮಕ್ಕು ನೀಡಿ ರೈತರು ಪ್ರತಿಭಟನೆ ನಡೆಸದಂತೆ, ಬೀದಿಗಿಳಿಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೋರಾಟ ಮಾಡಿದರೆ ರೈತರಿಗೆ ಪಾಠ ಕಳಿಸುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಅವರೂ ಹೇಳಿದ್ದಾರೆ.
2021ರ ಆಕ್ಟೊಬರ್ 3ರಂದು, ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಅವರು ‘ಪ್ರತಿ ಜಿಲ್ಲೆಯಲ್ಲಿ ನಮ್ಮ ಜನ 7100 ಜನರನ್ನು ಕರೆತಂದು, ರೈತರನ್ನು ದೊಣ್ಣೆಯಲ್ಲಿ ಹೊಡೆದು ಓಡಿಸಬೇಕು, ನಂತರದ ಪರಿಣಾಮ ಲೆಕ್ಕಿಸಬೇಡಿ’ ಎಂದು ಕರೆ ನೀಡಿದ್ದರು.ಇನ್ನು ಸೆಪ್ಟೆಂಬರ್ 25ರಂದು ಅಜಯ್ ಮಿಶ್ರಾ ಅವರು ಲಖಿಂಪುರ ಖೇರಿಯಲ್ಲಿ ‘ರೈತರು ಬದಲಾದರೆ ಒಳ್ಳೆಯದು, ಇಲ್ಲದಿದ್ದರೆ ನಾವು ಕೇವಲ 2 ನಿಮಿಷದಲ್ಲಿ ನಿಮಗೆ ಪಾಠ ಕಲಿಸಿ, ಎಲ್ಲವನ್ನು ಸರಿ ಮಾಡುತ್ತೇವೆ’ ಎಂದಿದ್ದರು. ಈಗ ಅವರ ಪುತ್ರ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದಿದ್ದಾನೆ.ಈ ಘಟನೆ ನಂತರ ಉತ್ತರ ಪ್ರದೇಶ ಉಸ್ತುವಾರಿ ವಹಿಸಿರುವ ಪ್ರಿಯಾಂಕಾ ಗಾಂಧಿ ಅವರು ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುವಾಗ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ. ಅವರನ್ನು ಈ ರೀತಿ ಬಂಧಿಸಿರುವುದು ಅಪರಾಧ. ‘ನೀವು ಬಂಧನ ವಾರೆಂಟ್ ತೀರಿಸಿ, ಯಾವ ಕಾರಣಕ್ಕೆ, ಯಾವ ಕಾನೂನಿನ ಅಡಿಯಲ್ಲಿ ಬಂಧಿಸುತ್ತಿದ್ದೀರಿ’ ಎಂದು ಪ್ರಿಯಾಂಕಾ ಅವರು ಪೊಲೀಸರನ್ನು ಕೇಳಿದ್ದನ್ನು ನೀವೆಲ್ಲ ನೋಡಿದ್ದೀರಿ. ಅವರನ್ನು ಬಂಧಿಸಿ 40 ಗಂಟೆಗಳಾದರೂ ಅವರ ವಿರುದ್ಧ ಕ್ರಮವೂ ಇಲ್ಲ, ವಾರೆಂಟ್ ಕೂಡ ಇಲ್ಲ.
ಮೋದಿಯವರು ನಿನ್ನೆ ಲಖನೌನಲ್ಲೇ ಇದ್ದರೂ ಅವರು ರೈತರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡದೇ ನಿರ್ಲಕ್ಷಿಸಿದ್ದಾರೆ. ರೈತರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ. ಪ್ರಿಯಾಂಕಾ ಗಾಂಧಿ ಅವರು ಯಾಕೆ ಕಾನೂನು ಬಾಹಿರವಾಗಿ ಬಂಧಿಸಿದ್ದೀರಿ ಎಂಬ ಪ್ರಶ್ನೆಯನ್ನೂ ಮಾಡಿಲ್ಲ. ನಂತರ ಪ್ರಿಯಾಂಕಾ ಗಾಂಧಿ ಅವರೇ, ‘ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ ಈ ಬಗ್ಗೆ ಗಮನಹರಿಸಿ’ ಎಂದು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.